ಇಂದ್ರ ಧನುಷ್ ಅಭಿಯಾನಕ್ಕೆ ಚಾಲನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪರಿಣಾಮಕಾರಿ ಇಂದ್ರ ಧನುಷ್ ೫.೦ ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲ ತಾಯಂದಿರು ಮತ್ತು ಗರ್ಭಿಣಿ ಸ್ತ್ರೀಯರು ಸಕ್ರಿಯಾವಾಗಿ ಭಾಗವಹಿಸಿ ಅಗತ್ಯ ಲಸಿಕೆಯನ್ನು ಪಡೆದುಕೊಳ್ಳುವಂತೆ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ನಗರದ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಆಯೋಜಿಸಿದ್ದ ಇಂದ್ರ ಧನುಷ್ ೫.೦ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದ್ರ ಧನುಷ್ ಕಾರ್ಯಕ್ರಮದಡಿ ನೀಡುವ ಲಸಿಕೆಗಳಿಂದ ಪ್ರಮುಖ ಕಾಯಿಲೆಗಳಿಂದ ಹಸುಗೂಸು, ಮಕ್ಕಳು ಮತ್ತು ತಾಯಂದಿರು ಹಾಗೂ ಗರ್ಭಿಣಿಯರನ್ನು ರಕ್ಷಿಸಬಹುದು ಎಂದು ಹೇಳಿದರು
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಾನುಸಾರ ವಯಸ್ಸಿಗೆ ಅನುಗುಣವಾಗಿ ಲಸಿಕೆ ಪಡೆಯದ, ಬಿಟ್ಟು ಹೋದ, ಲಸಿಕೆ ವಂಚಿತ ಮತ್ತು ಲಸಿಕಾರಣಕ್ಕೆ ಬಾಕಿಯಿರುವ ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರ ಧನುಷ್ ೫.೦ ಯಲ್ಲಿ ಲಸಿಕೆ ನೀಡಲಾಗುವುದು. ವಿಶೇಷವಾಗಿ ದಡಾರ, ರುಬೆಲ್ಲಾ ರೋಗ ನಿರೋಧಕತೆಯ ಅಂತರವನ್ನು ಕಡಿಮೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಆಗಸ್ಟ್ ೦೭ ರಿಂದ ೧೨ ರವರೆಗೆ ಮೊದಲ ಹಂತದಲ್ಲಿ, ಸೆಪ್ಟೆಂಬರ್ ೧೧ ರಿಂದ ೧೬ ರವರೆಗೆ ೨ನೇ ಹಂತದಲ್ಲಿ ಹಾಗೂ ಅಕ್ಟೋಬರ್ ೦೯ ರಿಂದ ೧೪ ರವರೆಗೆ ೩ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಲಸಿಕೆಯಿಂದ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಉದ್ದೇಶವಿದೆ, ಅರ್ಹ ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆಯುವಂತೆ ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ ಮಾತನಾಡಿ ದಡಾರ ಮತ್ತು ರುಬೆಲ್ಲಾ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ ನೀಡಲಾಗುತ್ತಿರುವ ಲಸಿಕೆಯಿಂದ ಯಾರು ವಂಚಿತರಾಗಬಾರದು ಮತ್ತು ಜನರು ಯಾವುದೇ ಹಂತದ ಲಸಿಕೆಯಿಂದ ವಂಚಿತರಾಗದೆ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ಬಾಬು ಮಾತನಾಡಿದರು. ಆರ್.ಸಿ.ಹೆಚ್. ಅಧಿಕಾರಿ ಡಾ. ಭರತ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಶಿಕ್ಷಣ ಜಾಲಾಜಾಕ್ಷಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ. ಎಂ.ಆರ್. ಹರೀಶ್, ಮುಖ್ಯ ಆಡಳಿತಾಧಿಕಾರಿ ಪರಮೇಶ್, ನಿವಾಸಿ ವೈದ್ಯಾಧಿಕಾರಿ ಡಾ. ಕಲ್ಪನಾ, ಆಯುಷ್ ಅಧಿಕಾರಿ ಡಾ. ಗೀತಾ, ಚಿಕ್ಕಮಗಳೂರು ತಾಲ್ಲೂಕು ವೈದ್ಯಾಧಿಕಾರಿ ಡಾ. ಸೀಮಾ ಮುಂತಾದವರಿದ್ದರು.
Indra Dhanush 5.0 and World Breastfeeding Week programme