ಮಲ್ಲೇನಹಳ್ಳಿ ವಿದ್ಯುತ್ ಉಪಕೇಂದ್ರ ಉದ್ಘಾಟನೆ
ಚಿಕ್ಕಮಗಳೂರು: ಮಲ್ಲೇನಹಳ್ಳಿಯಲ್ಲಿ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರದಿಂದಾಗಿ ಸುತ್ತಮುತ್ತಲ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯಲು ಸಾಧ್ಯವಾಗುತ್ತದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಹೇಳಿದರು.
ತಾಲ್ಲೂಕಿನ ದೇವಿಪುರದಲ್ಲಿ ಮೆಸ್ಕಾಂ ಇಲಾಖೆ ಸ್ಥಾಪಿಸಿರುವ ಮಲ್ಲೇನಹಳ್ಳಿ ವಿದ್ಯುತ್ ಉಪ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
9:50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕೇಂದ್ರದಿಂದ ಮಲ್ಲೇನಹಳ್ಳಿ ಬಿಂಡಿಗಾ ಹೊಸಪೇಟೆ, ಅರಿಶಿಣಗುಪ್ಪೆ ಕುಮಾರಗಿರಿ ದತ್ತಪೀಠ ಮಹಲ್ ಪಂಡರವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮತ್ತು ಪ್ರದೇಶಗಳ ವಿದ್ಯುತ್ ಸಮಸ್ಯೆ ಬಹಳಷ್ಟು ನಿವಾರಣೆ ಆಗುತ್ತದೆ ಎಂದರು.
ಈ ಹಿಂದೆ ಚಿಕ್ಕಮಗಳೂರಿನಿಂದ ಈ ಭಾಗಕ್ಕೆ ವಿದ್ಯುತ್ ಸರಬರಾಜಾಗುತ್ತಿತ್ತು. ಹಾಗಾಗಿ ಈ ಭಾಗದಲ್ಲಿ ಆಗಾಗ ವಿದ್ಯುತ್ ಡ್ರಿಪ್ ಆಗುತ್ತಿತ್ತು. ಇದೀಗ ಇಲ್ಲೇ ಕೇಂದ್ರವನ್ನು ಸ್ಥಾಪಿಸಿರುವುದರಿಂದ ಆ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಬಹಳಷ್ಟು ವಿದ್ಯುತ್ ಸಹ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಹೆಚ್. ಡಿ. ತಮ್ಮಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಮಲ್ಲಂದೂರಿನಲ್ಲೂ ಎಂ ಎ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಾಗರ ಹೋಬಳಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಈಗಾಗಲೇ ಒಂದುವರೆ ಕೋಟಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅಲ್ಲಿ ಕೇಂದ್ರ ಸ್ಥಾಪನೆಯಾಗುವುದರಿಂದ ಜಾಗರ ಮತ್ತು ಕಸಬಾ ಹೋಬಳಿಗಳ ಪ್ರದೇಶಗಳ ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸಭೆ ಸಂಸದರಾದ ಜೈರಾಮ್ ರಮೇಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್,ವಿಧಾನ ಪರಿಷತ್ ಮಾಜಿ ಸದಸ್ಯರಾದ ಗಾಯತ್ರಿ ಶಾಂತೇಗೌಡ ಮುಂತಾದವರಿದ್ದರು.
Inauguration of Mallenahalli Power Substation