ಜನ ಸಾಮಾನ್ಯರೊಂದಿಗಿರುವುದು ಸಂತೋಷ ತರುವ ಸಂಗತಿ
ಚಿಕ್ಕಮಗಳೂರು: ಜನ ಸಾಮಾನ್ಯರೊಂದಿಗಿರುವುದು ಸ್ವಾಭಾವಿಕವಾಗಿ ನಮಗೆ ಸಂತೋಷ ತರುವ ಸಂಗತಿ. ಅದನ್ನು ಅಪರಾಧ ಎಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾಗ ಬಿಜೆಪಿ ಮುಖಂಡರು ಸಾಮಾನ್ಯ ಜನರೊಂದಿಗೆ ನಿಂತು ಮೋದಿ ಅವರನ್ನು ಸ್ವಾಗತಿಸಿದ್ದನ್ನು ಟೀಕಿಸಿರುವ ಕಾಂಗ್ರೆಸಿಗರಿಗೆ ಉತ್ತರಿಸಿದ ರವಿ, ಚಂದ್ರಯಾನ-೩ ಯಶಸ್ಸಿನ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂದಿದ್ದರು. ನಮ್ಮ ನಾಯಕರು ಜನ ಸಾಮಾನ್ಯರ ಜೊತೆಗಿದ್ದು ಪ್ರಧಾನಿಯವರನ್ನು ಸ್ವಾಗತ ಮಾಡಿದ್ದಾರೆ ಎಂದರು.
ಜನಸಾಮಾನ್ಯರೊಂದಿಗಿದ್ದರೆ ಕಾಂಗ್ರೆಸಿಗರಿಗೆ ಕೀಳರಿಮೆ ಭಾವನೆ ಬರುತ್ತದೆ. ಅವರು ಒಡ್ಡೋಲಗದ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಟೀಕಿಸಿದರು.
ಚಂದ್ರಯಾನ-೩ ಭಾರತದ ಪ್ರಾಚೀನ ವೈಭವ ಸಾಮರ್ಥ್ಯವನ್ನು ಪುನರ್ಸ್ಥಾಪನೆ ಮಾಡಿದ ಯಾನ. ಇಡೀ ದೇಶವೇ ಇದಕ್ಕೆ ಹೆಮ್ಮೆ ಪಟ್ಟಿದೆ. ಇದು ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿರುವುದಲ್ಲ. ಯಾವ ಕಾಲಘಟ್ಟದಲ್ಲಿ ಅದು ನಡೆಯುತ್ತದೆಯೋ ಆ ಕಾಲಘಟ್ಟದ ನಾಯಕತ್ವದ ಮೂಲಕ ಜಗತ್ತು ಮನ್ನಣೆ ಮತ್ತು ಗೌರವವನ್ನು ವ್ಯಕ್ತಪಡಿಸುತ್ತದೆ. ಅದು ಸ್ವಾಭಾವಿಕ ಎಂದರು.
ಚಂದ್ರಯಾನ-೩ ದೇಶದ ೧೪೦ ಕೋಟಿ ಜನರಿಗೆ ಸೇರಿದ್ದೆಂದು ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಅದರಲ್ಲಿ ಕಾಂಗ್ರೆಸ್ ಕೂಡ ಇದೆ ಎಂದು ಎಂದು ಕೊಂಡಿದ್ದೇವೆ. ಅವರು ನಾವು ಇಲ್ಲ ಎಂದು ಕೊಂಡಿದ್ದರೆ ದುರ್ದೈವ ಎಂದರು.
Former minister CT Ravi