ಪ್ರವಾಸೋದ್ಯಮದ ಜೊತೆಗೆ ಪರಿಸರವನ್ನೂ ಉಳಿಸುವ ಕೆಲಸ ಮಾಡಬೇಕಿದೆ
ಚಿಕ್ಕಮಗಳೂರು: ಪ್ರವಾಸೋದ್ಯಮದ ಜೊತೆಗೆ ಪರಿಸರವನ್ನೂ ಉಳಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ವೈವಿದ್ಯಮಯವಾದ ರಾಷ್ಟ್ರವಾಗಿದೆ. ಸಂಸ್ಕೃತಿ, ಪರಂಪರೆ, ಕ್ರೀಡೆಗೆ ಹೆಸರಾಗಿದೆ. ಬೇಲೂರು ಚನ್ನಕೇಶವ ದೇವಸ್ಥಾನವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಅಲ್ಲಿಗೆ ವಿದೇಶದಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಸ್ಥಳೀಯರು ಹಾಗೂ ಸರ್ಕಾರದ ಆದಾಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಪ್ರವಾಸಿಗರು ಹೊರಗಿನಿಂದ ಬರುವುದರಿಂದ ಜಿಲ್ಲೆಗೂ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಅನುಕೂಲವಾಗುತ್ತದೆ. ಆದರೆ ಇದರ ಜೊತೆಯಲ್ಲೇ ಪರಿಸರವನ್ನೂ ಉಳಿಸುವು ಕೆಲಸ ಆಗಬೇಕಿದೆ. ಈಗಾಗಲೇ ಮಳೆ ಕೊರತೆಯನ್ನು ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಬಗ್ಗೆ ರ್ಯಾಲಿಯಲ್ಲಿ ಭಾಗವಹಿಸಿದವರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಲೋಹಿತ್ ಮಾತನಾಡಿ, ಕಳೆದ ವರ್ಷ ಗಿರಿ ತಪ್ಪಲನ್ನು ನೀಲ ಕುರಂಜಿ ಹೂಗಳು ವ್ಯಾಪಿಸಿಕೊಂಡಿದ್ದ ಕಾರಣ ಸುಮಾರು ೬೦ ಲಕ್ಷ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ನಂತರ ಜೂನ್ ತಿಂಗಳಲ್ಲಿ ೭ ಲಕ್ಷ ಮಂದಿ, ಆಗಸ್ಟ್ನಲ್ಲಿ ೬ ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದರು.
ಪ್ರವಾಸೋದ್ಯಮ ಎಂದರೆ ಶೃಂಗೇರಿ, ಹೊರನಾಡು, ಮುಳ್ಳಯ್ಯನಗಿರಿ ಪ್ರದೇಶಗಳು ಮಾತ್ರ ಎನ್ನುವಂತಾಗಿತ್ತು. ಆದರೆ ಚಿಕ್ಕಮಗಳೂರು ಜಿಲ್ಲೆ ಎಲ್ಲ ರೀತಿಯ ಪ್ರವಾಸಕ್ಕೂ ಹೇಳಿಮಾಡಿಸಿದ ಪ್ರದೇಶ. ಈ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಇಲ್ಲದ ಪ್ರದೇಶಗಳ ಬಗ್ಗೆ ಪ್ರಚುರ ಪಡಿಸಿ ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ರಾಜ್ಯದಲ್ಲಿ ನಂ.೧ ಮಾಡುವುದು ನಮ್ಮ ಉದ್ದೇಶ ಎಂದರು.
ಜಿಲ್ಲಾಡಳಿತ, ಹೊಂಸ್ಟೇ ಅಸೋಸಿಯೇಷನ್, ರೆಸಾರ್ಟ್ ಅಸೋಸಿಯೇಷನ್, ಜೀಪ್ ಚಾಲಕರ ಸಂಘಟನೆ ಎಲ್ಲರ ಸಹಕಾರದಲ್ಲಿ ಪ್ರವಾಸೋದ್ಯಮ ಹಾಗೂ ಹಸಿರು ಹೂಡಿಕೆ ಹೆಸರಿನಲ್ಲಿ ಪರಿಸರ ಪೂರಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ ಎಂದರು.
Bike rally organized as part of World Tourism Day