ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು
ಚಿಕ್ಕಮಗಳೂರು: ವ್ಯಾಯಾಮ, ಪೌಷ್ಠಿಕ ಆಹಾರ, ಕೊಲೆಸ್ಟ್ರಾಲ್ ಮುಕ್ತ ಆಹಾರಗಳನ್ನು ಸೇವಿಸುವ ಮೂಲಕ ತಮ್ಮ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್ಬಾಬು ಕರೆ ನೀಡಿದರು.
ಅವರು ಇಂದು ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರiವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವ ಮೂಲಕ ಒಳ್ಳೆಯ ಜೀವನ ನಡೆಸಬೇಕು ಎಂದು ವಿಶ್ವ ಹೃದಯ ದಿನದ ಶುಭ ಹಾರೈಸಿದರು.
ಸಕಾರಾತ್ಮಕ ಚಿಂತನೆಗಳು ನಮ್ಮ ಆರೋಗ್ಯಕ್ಕೆ ಪೂರಕವಾಗಿರುತ್ತವೆ ಎಂದ ಅವರು, ಉತ್ತಮ ಆರೋಗ್ಯಕ್ಕಾಗಿ ನಾವು ಉತ್ತಮ ಆಹಾರ ಸೇವಿಸಬೇಕು. ಉತ್ತಮವಾದ ಚಿಂತನೆ ಮಾಡಬೇಕು. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಕೆ.ಆರ್.ಎಸ್ ಆಸ್ಪತ್ರೆ ಸಾವಿರಾರು ರೋಗಿಗಳಿಗೆ ಪುನರ್ ಜನ್ಮ ನೀಡಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ, ಆಸ್ಪತ್ರೆ ವೈದ್ಯ ಸ್ನೇಹಿತನೂ ಆಗಿರುವ ಡಾ|| ಯೋಗೀಶ್ರವರಿಗೆ ಶುಭ ಕೋರಿದರು.
ಖ್ಯಾತ ಮಕ್ಕಳ ತಜ್ಞ ಡಾ|| ಜೆ.ಪಿ ಕೃಷ್ಣೇಗೌಡ ಮಾತನಾಡಿ, ಮನುಷ್ಯನ ಸೃಷ್ಠಿ ಅದ್ಭುತವಾಗಿದ್ದು, ದೇಹದಲ್ಲಿ ಕಿಡ್ನಿ, ಕಣ್ಣು, ಕಿವಿ, ಮೂಗು ಎಲ್ಲವನ್ನೂ ಎರಡೆರಡು ಕೊಟ್ಟು ಮೆದುಳು ಹಾಗೂ ಹೃದಯಒಂದನ್ನು ದೇವರು ಕರುಣಿಸಿದ್ದಾನೆಂದರು.
ಹೃದಯಕ್ಕೆ, ಕಿಡ್ನಿಗೂ ಹಲವು ಕಾಯಿಲೆಗಳಿದ್ದು, ಇಂದು ಒಂದೊಂದೂ ಅಂಗಕ್ಕೂ ಪ್ರತಿಯೊಬ್ಬ ವೈದ್ಯರು ಇದ್ದಾರೆ, ವೈದ್ಯರಿಗೆ ನೀತಿ, ಧರ್ಮ, ಗೋತ್ರ, ವೇದಿಕೆ, ವೈದ್ಯಕೀಯ ಸೇವೆ, ಬಾವುಟ, ಪ್ರೇಮ, ಜಯಕಾರ ಇವೆಲ್ಲವೂ ವೈದ್ಯೋನಾರಾಯಣ ಎಂಬಂತೆ ಸೇವೆ ಸಲ್ಲಿಸುವ ಭಾಗವಾಗಿದೆ ಎಂದು ಹೇಳಿದರು.
ತಾವು ವೈದ್ಯ ವೃತ್ತಿಯನ್ನು ಆರಂಭಿಸಿದ ಸಂಧರ್ಭದಲ್ಲಿ ಹೊರದೇಶಕ್ಕೆ ಹೋಗುವಂತೆ ಕೆಲವು ಒತ್ತಡಗಳು ಎದುರಾದಾಗ ನನ್ನ ಗುರುಹಿರಿಯರು, ತಂದೆ-ತಾಯಿಯ ಆಶೀರ್ವಾದದೊಂದಿಗೆ ನನ್ನ ಊರಿನ ಜನರಿಗೆ ಸೇವೆ ಮಾಡಬೇಕೆಂದು ನಿರ್ಧರಿಸಿ, ಮೊಟ್ಟ ಮೊದಲ ಬಾರಿಗೆ ಜೋಳದಾಳ್ ನರ್ಸಿಂಗ್ ಹೋಂ ಸ್ಥಾಪನೆ ಮಾಡಲಾಯಿತು. ಬಡವರು, ಬಿಕ್ಷುಕರಿಗೆ ಸೇವೆ ಸಲ್ಲಿಸು ಎಂದು ಕುವೆಂಪು ಅವರ ನಾಣ್ಣುಡಿಯಂತೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ವೈದ್ಯರಿಗೆ ಪ್ರತಿ ದಿನವೂ ವಿಶೇಷ ದಿನವಾಗಿದೆ. ಕರ್ತವ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನನ್ನ ಎರಡು ಕಿಡ್ನಿಗಳೂ ವಿಫಲವಾದವು, ನನ್ನ ನರ್ಸಿಂಗ್ ಹೋಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ಎಂಬಾತ ಕಿಡ್ನಿ ದಾನ ಮಾಡಿದ್ದು, ಇಂದು ಗುರು-ಹಿರಿಯರ ಆಶೀರ್ವಾದದೊಂದಿಗೆ ಜೀವಂತವಾಗಿದ್ದೇನೆ ಎಂದು ಹೇಳಿದರು.
ಮಂದಿರ, ಗುರುದ್ವಾರ, ಚರ್ಚ್, ಮಸೀದಿ ನನ್ನ ಎಲ್ಲಾ ದೇವಾಲಯಗಳು ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಹೃದಯ ಸಂಬಂಧಿ ಮಕ್ಕಳ ಖಾಯಿಲೆಯನ್ನು ಶೀಘ್ರ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದಾಗ ಗುಣಮುಖರಾಗುತ್ತಾರೆ, ಮುಂದೆ ಅವರಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಬಾದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಡಾ|| ಕಿಶೋರ್ಕುಮಾರ್ ಹೆಗಡೆ ಮಾತನಾಡಿ, ವರ್ಷಕ್ಕೊಮ್ಮೆಯಾದರೂಆರೋಗ್ಯತಪಾಸಣೆಯನ್ನು ಮಾಡಿಸಿಕೊಳ್ಳುವ ಮೂಲಕ ಬಹುತೇಕ ರೋಗಗಳನ್ನು ಬಾರದಂತೆತಡೆಗಟ್ಟಬಹುದುಎಂದು ತಿಳಿಸಿದರು.
ಕೆ.ಆರ್.ಎಸ್ ಆಸ್ಪತ್ರೆಯ ಡಾ|| ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ನಗರಕ್ಕೆ ತುಂಬ ಅವಶ್ಯಕತೆ ಇರುವ ಹೃದಯ ಚಿಕಿತ್ಸೆ ಘಟಕವನ್ನು ನಮ್ಮ ಆಸ್ಪತ್ರೆಯಲ್ಲಿಯೇ ಪ್ರಾರಂಭಿಸಿದ್ದೇವೆ, ನಾಗರೀಕರು ಪ್ರತಿ ನಿತ್ಯ ಪೌಷ್ಟಿಕ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವುದರಿಂದ ಹೃದಯ ರೋಗಗಳನ್ನು ತಡೆಗಟ್ಟುಬಹುದೆಂದು ತಿಳಿಸಿದರು.
ವಿದ್ಯಾರ್ಥಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಇಂದುಕುಮಾರ್ ಮಾತನಾಡಿ ನಮ್ಮ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ನ ವಿದ್ಯಾರ್ಥಿಗಳು ರಾಜ್ಯದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ, ಸ್ಥಳಿಯವಾಗಿ ಕೆ.ಆರ್.ಎಸ್ ಆಸ್ಪತ್ರೆಯ ಡಾ. ಯೋಗೀಶ್ ರವರು ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೃದಯರೋಗ ತಜ್ಞರಾದ ಡಾ. ಶ್ರೀಧರ್, ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ|| ಮೋಹನ್ಕುಮಾರ್, ಅನ್ನಪೂರ್ಣ ಆಸ್ಪತ್ರೆಯ ಡಾ|| ಸುಂದರೇಶ್ ಬಿ.ಎಸ್, ಡಾ. ಮಲ್ಲಿಕಾರ್ಜುನ್, ಡಾ. ಜ್ಯೋತಿಕೃಷ್ಣ, ಡಾ. ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
World Heart Day Celebration held at KRS Hospital