ನಿಗದಿತ ಸಮಯದಲ್ಲಿ ಎಲ್ಲಾ ರೀತಿಯ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು
ಚಿಕ್ಕಮಗಳೂರು: ನಗರದ ನಾಗರೀಕರು ನಿಗದಿತ ಸಮಯದಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲಾ ರೀತಿಯ ತೆರಿಗೆಗಳನ್ನು ನಿಗದಿತ ಸಮಯದಲ್ಲಿ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದರು.
ಅವರು ಇಂದು ನಗರಸಭೆಯ ಎರಡನೇ ವಾರ್ಡಿನಲ್ಲಿ ಅ.೩ ರಿಂದ ೧೨ ರವರೆಗೆ ತೆರಿಗೆ ವಸೂಲಾತಿ ಆಂದೋಲನವನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದ್ದು, ಸದರಿ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.
ನಗರಸಭೆಯ ಎಲ್ಲಾ ವಾರ್ಡ್ಗಳಲ್ಲಿಯೂ ಈ ಆಂದೋಲನ ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಕಂದಾಯ ಪಾವತಿಸಬಹುದಾಗಿದೆ ಇದಕ್ಕಾಗಿ ಗೂಗಲ್ ಪೇ ಮತ್ತು ಫೋನ್ ಪೇ ಎರಡನ್ನೂ ವ್ಯವಸ್ಥೆ ಮಾಡಿದ್ದು, ಜೊತೆಗೆ ನಗರಸಭೆಯಲ್ಲೂ ಶಾಖೆಯನ್ನು ತೆರೆಯಲಾಗಿದೆ. ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತೆರಿಗೆ ಪಾವತಿಸುವಂತೆ ಮನವಿ ಮಾಡಿದರು.
ನಗರಸಭೆಗೆ ನಗದಿತ ಸಮಯದಲ್ಲಿ ತೆರಿಗೆ ಪಾವತಿಸುತ್ತಿಲ್ಲ ಎಂಬ ದೃಷ್ಟಿಯಿಂದ ಈ ಅವಧಿಯಲ್ಲಿ ವಿಶೇಷ ತೆರಿಗೆ ಪಾವತಿ ಆಂದೋಲನ ಪ್ರಾರಂಭಿಸಿದ್ದೇವೆ, ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸಿದಾಗ ತೆರಿಗೆ ಪಾವತಿ ಸುಲಭವಾಗುತ್ತದೆ ಎಂದರು.
ಕಂದಾಯ ವಸೂಲಾತಿ ವಿಳಂಭವಾಗುತ್ತಿದೆ ಎಂದು ಸರ್ಕಾರ ಸೂಚನೆ ನೀಡಿರುವ ಮೇರೆಗೆ ಇಂದು ತೆರಿಗೆ ಆಂದೋಲನಕ್ಕೆ ಚಾಲನೆ ನೀಡಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳ ಎಲ್ಲಾ ರೀತಿಯ ತೆರಿಗೆಗಳನ್ನು ಏಕ ಕಾಲದಲ್ಲಿ ಪಾವತಿಸಬಹುದಾಗಿದೆ ಎಂದು ತಿಳಿಸಿದರು.
ತಮಟೆ ಬಾರಿಸುವ ಮೂಲಕ ಅರಿವು ಉದ್ಘಾಟನೆ ಮಾಡಿದ್ದು, ಮನೆ ಮನೆಗೆ ಹೋಗಿದ್ದು ನೀರಿನ ತೆರಿಗೆ ವಸೂಲಾತಿ ಮಾಡಲಾಗದ ಪರಿಣಾಮ ಸುಮಾರು ೬ ಕೋಟಿಗೂ ಹೆಚ್ಚು ಕಂದಾಯ ಬಾಕಿ ಇದೆ ಕೂಡಲೇ ನಾಗರೀಕರು ದಂಡ ಸಹಿತ ತೆರಿಗೆ ಪಾವತಿಸಲು ಅವಕಾಶ ಇದ್ದು, ಅ.೧೨ ರ ನಂತರ ತೆರಿಗೆ ಪಾವತಿಸದಿದ್ದರೆ ನಗರಸಭೆಯಿಂದ ನೀಡಲಾಗಿರುವ ಮೂಲಭೂತ ಸೌಕರ್ಯಗಳಾದ ಯುಜಿಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮುಂತಾದವುಗಳನ್ನು ಕಡಿತ ಮಾಡುವುದರ ಜೊತೆಗೆ ಜಪ್ತಿ ವಾರಂಟ್ ನೀಡಿ, ಕೇಸು ದಾಖಲು ಮಾಡಲಾಗುವುದೆಂದು ಎಚ್ಚರಿಸಿದರು.
ದಯವಿಟ್ಟು ಸಾರ್ವಜನಿಕರು ಇದಕ್ಕೆ ಅವಕಾಶ ಮಾಡಿಕೊಡದೆ ಎಚ್ಚೆತ್ತುಕೊಳ್ಳುವಂತೆ ಮಾಹಿತಿ ನೀಡುವ ೩೫ ವಾರ್ಡ್ಗಳಲ್ಲಿಯೂ ಅರಿವು ಮೂಡಿಸಲಾಗುತ್ತಿದೆ. ಆದ್ದರಿಂದ ಎಲ್ಲಾ ರೀತಿಯ ಆಸ್ತಿಗಳ ತೆರಿಗೆಗಳನ್ನು ನಗರಸಭೆಗೆ ಪಾವತಿ ಮಾಡಬೇಕು ಎಂದು ಹೇಳಿದ ಅವರು ನಗರಸಭೆಯಲ್ಲಿ ಗಣಕೀಕರಣ ಮಾಡುತ್ತಿರುವುದರಿಂದ ಮನೆ ಆರ್.ಆರ್ ಸಂಖ್ಯೆ, ಆಧಾರ್ ಸಂಖ್ಯೆ ಮುಂತಾದ ದಾಖಲಾತಿಗಳನ್ನು ಒದಗಿಸಿ ಸ್ವತ್ತನ್ನು ಇ-ಖಾತೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಕುರಿತು ನಗರಸಭೆಯಿಂದ ವ್ಯಾಪಕ ಪ್ರಚಾರ ಮಾಡುತ್ತಿದ್ದೇವೆ, ಪ್ಲಾಸ್ಟಿಕ್ ಉತ್ಪಾದನೆ ಆಗುತ್ತಿರುವುದರಲ್ಲಿಯೇ ತಡೆಯುವ ಪ್ರಯತ್ನ ಮಾಡುತ್ತಿದ್ದು, ಕಾನೂನು ಉಲ್ಲಂಘಿಸಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂತಹ ಅಂಗಡಿ ಪರವಾನಗಿ ರದ್ದುಮಾಡಿ ಶಾಶ್ವತವಾಗಿ ಅಂಗಡಿ ಬಂದ್ ಮಾಡುತ್ತೇವೆಂದು ಎಚ್ಚರಿಸಿದರು.
ಬೀದಿ ದೀಪ ಅಳವಡಿಕೆ ಕಳೆದ ೬ ತಿಂಗಳಿಂದ ನಡೆಯುತ್ತಿದ್ದು, ಆಧುನಿಕ ಪದ್ದತಿಗೆ ಬದಲಾಯಿಸುವಾಗಿ ಬೆಳಕು ಕಡಿಮೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಅಂತಹ ಬೀದಿ ದೀಪಗಳನ್ನು ಬದಲಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಸದಸ್ಯೆ ಇಂದಿರಾಶಂಕರ್ ಮಾತನಾಡಿ ನಗರಸಭೆ ಸಿಬ್ಬಂದಿಗಳು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕಂದಾಯ ವಸೂಲಿಗಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ, ಬಾಕಿ ಉಳಿಸಿಕೊಂಡಿರುವ ತೆರಿಗೆದಾರರು ಕೂಡಲೇ ನಲ್ಲಿ, ನಿವೇಶನ, ಮನೆ ಕಂದಾಯ ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.
ಈಗಾಗಲೇ ನಮ್ಮ ವಾರ್ಡಿನಲ್ಲಿ ರಸ್ತೆ, ಚರಂಡಿ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇನೆ, ನ್ಯಾಯಬೆಲೆ ಅಂಗಡಿಯನ್ನು ತೆರೆಯುವಂತೆ ವಾರ್ಡಿನ ನಾಗರೀಕರು ಬೇಡಿಕೆ ಇಟ್ಟಿದ್ದು, ಈ ಸಂಬಂಧ ಶಾಸಕರ ಬಳಿ ಚರ್ಚಿಸಿ ನ್ಯಾಯಬೆಲೆ ಅಂಗಡಿ ತೆರೆಯವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಕಂದಾಯ ಅಧಿಕಾರಿಗಳಾಸ ರಮೇಶ್ನಾಯ್ಡು, ಮುಖ್ಯ ಲೆಕ್ಕಾಧಿಕಾರಿ ಲತಾಮಣಿ, ವಿಭಾಗದ ಸಿಬ್ಬಂದಿಗಳಾದ ಶಿವಾನಂದ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
Tax collection movement