September 20, 2024

ಅತ್ಯಾಚಾರದ ಸುಳ್ಳು ಆಪಾದನೆ ಮಾಡಿ ಮಾನಹಾನಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ತಲಾ 2 ವರ್ಷ ಶಿಕ್ಷೆ

0
ಮಾಜಿ ಸಚಿವ ಡಿ.ಎನ್.ಜೀವರಾಜ್ ಸುದ್ದಿಗೋಷ್ಠಿ

ಮಾಜಿ ಸಚಿವ ಡಿ.ಎನ್.ಜೀವರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರ ವಿರುದ್ಧ ಅತ್ಯಾಚಾರದ ಸುಳ್ಳು ಆಪಾದನೆ ಮಾಡಿ ಮಾನಹಾನಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಎನ್.ಆರ್.ಪುರ ನ್ಯಾಯಾಲಯವು ತಲಾ ೨ ವರ್ಷ ಶಿಕ್ಷೆ ಮತ್ತು ದಂಡ ವಿಧಿಸಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಜೀವರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀವರಾಜ್, ತಮ್ಮ ವಿರುದ್ಧ ಸುಳ್ಳು ಆಪಾದನೆ ಮಾಡಿ ನಮ್ಮ ಚಾರಿತ್ರ್ಯವಧೆಗೆ ಯತ್ನಿಸಿದ ಎನ್‌ಆರ್‌ಪುರದ ಈಚೆಕೆರೆ ಗ್ರಾಮದ ಮನು ಮತ್ತು ಮಡಬೂರಿನ ಅರಣ್ಯಾನಿ ಎಂಬಾಕೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದರು.

ಚಾರಿತ್ರ್ಯವಧೆ ಮಾಡಿದರೆ ಮಾತ್ರ ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯ ಎಂದು ಯೋಚಿಸಿದ ಕೆಲವರು ನಮ್ಮ ಜೊತೆಯೇ ಇದ್ದ ಮನು ಎಂಬ ಕಾರ್ಯಕರ್ತನನ್ನು ಬಳಸಿಕೊಂಡು ಇಲ್ಲಸಲ್ಲದ ಕೆಟ್ಟ ಆರೋಪಗಳನ್ನು ಮಾಡಿದ್ದಲ್ಲದೆ, ಪ್ರಾರಂಭದಲ್ಲಿ ೫ ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟರು. ನಂತರ ೨ ಕೋಟಿಗೆ ಇಳಿಸಿದರು. ಕೊನೆಗೆ ೨೨ ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟರು. ಹಣ ಕೊಡದಿದ್ದರೆ ಮಾನ ಹಾನಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿವರಿಸಿದರು.

ಇದರ ವಿರುದ್ಧ ನಾವು ೨೦೧೩ ಆಗಸ್ಟ್ ೨೦ ರಂದು ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆವು. ಆದರೆ ೨೦೧೩ ನವೆಂಬರ್ ೮ ರಂದು ಮನು ಮತ್ತು ಅರಣ್ಯಾನಿ ಅವರು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ನನ್ನನ್ನೂ ಸೇರಿಸಿ ಎನ್‌ಆರ್ ಪುರ ತಾ.ಪಂ. ಮಾಜಿ ಅಧ್ಯಕ್ಷ ಆಶೀಷ್ ಕುಮಾರ್ ಮತ್ತೋರ್ವ ತಾ.ಪಂ. ಮಾಜಿ ಅಧ್ಯಕ್ಷ ನಾಗರಾಜ್ ಎಂಬ ಮೂರು ಮಂದಿ ವಿರುದ್ಧ ಮನಸ್ಸಿಗೆ ಅತ್ಯಂತ ನೋವುಂಟುಮಾಡುವಂತಹ ಕೆಟ್ಟ ಕೇಸು ದಾಖಲಿಸಿದರು. ಅಂದಿನ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಐಡಿಗೆ ತನಿಖೆಗೆ ವಹಿಸಿತ್ತು. ಸಮಗ್ರ ತನಿಖೆ ನಡೆಸಿದ ಸಿಐಡಿ ಪೊಲೀಸರು ಜೀವರಾಜ್ ಮತ್ತು ಇತರರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎನ್ನುವ ತೀರ್ಮಾನಕ್ಕೆ ಬಂದು ೨೦೧೪ ರಲ್ಲಿ ಎನ್‌ಆರ್‌ಪುರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತು ಎಂದರು.

ನಂತರ ಮನು ಮತ್ತು ಜೊತೆಗಾರರು ಕೋರ್ಟ್‌ನಲ್ಲಿ ಬಿ ಪೋರ್ಟ ತಪ್ಪು ಎಂದು ಚಾಲೆಂಜ್ ಮಾಡಿದರು. ಆದರೆ ಅದಕ್ಕೆ ಸೂಕ್ಯ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅದಕ್ಕೂ ನ್ಯಾಯಾಲದಲ್ಲಿ ಸೋಲಾಯಾಯಿತು. ಇದಾದದ ನಂತರವೂ ಕೆಲವು ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಇದೇ ಪ್ರಕರಣದ ಮೇಲೆ ಮಾತನಾಡಲಾರಂಭಿಸಿದರು. ಇದರ ಪರಿಣಾಮ ನಾನೂ ಸೇರಿದಂತೆ ಆಶೀಷ್ ಕುಮಾರ್, ನಾಗರಾಜ್ ಅವರ ಕುಟುಂಬ ಸಾರ್ವಜನಿಕವಾಗಿ ಹಿಂಸೆ ಅನುಭವಿಸಿದ ಜೊತೆಗೆ ನನ್ನ ಎರಡು ಬಾರಿ ಚುನಾವಣೆಯನ್ನು ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಒಂದೆಡೆ ಅನಗತ್ಯವಾಗಿ ಮಾನಹಾನಿ, ಮತ್ತೊಂದೆಡೆ ರಾಜಕೀಯದಲ್ಲಿ ಹಿನ್ನಡೆಯಿಂದಾಗಿ ಈ ಪ್ರಕರಣದಲ್ಲಿ ಬಲಿಪಶುವಾಗಬೇಕಾಯಿತು. ೨೦೧೮ ರ ಚುನಾವಣೆಯನ್ನೂ ಸೋಲ ಬೇಕಾಯಿತು. ಆದರೆ ನಾವು ಸಲ್ಲಿಸಿದ ದೂರು ಮಾತ್ರ ಅಲ್ಲಿಯ ವರೆಗೆ ಹಾಗೆಯೇ ಇತ್ತು. ಅದು ಏಕೆ ಎನ್ನುವುದು ಗೊತ್ತಾಗಲಿಲ್ಲ. ನಮ್ಮ ಸೋಲಿನ ನಂತರ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ, ಜಿ.ಪರಮೇಶ್ವರ್ ಅವರು ಗೃಹ ಸಚಿವರಾದ ಮೇಲೆ ಈ ಮೂರೂ ಪ್ರಕರಣಗಳು ಸಿಐಡಿಯಿಂದ ಚಾರ್ಜ್‌ಶೀಟ್ ಆಗಿಬಂತು. ೨೦೧೮ ರಿಂದ ೨೦೨೩ ರ ವರೆಗೆ ಎನ್‌ಆರ್‌ಪುರ ಕೋರ್ಟ್‌ನಲ್ಲಿ ಸುಧೀರ್ಘವಾದ ವಾದ ನಡೆದು ದಾಖೆಲೆಗಳ ಪರಿಶೀಲನೆ ನಂತರ ಇದೇ ತಿಂಗಳು ೫ ರಂದು ೬೫ ಪುಟಗಳ ತೀರ್ಪು ನೀಡಿ ಸುಳ್ಳು ಆಪಾದನೆಗಳನ್ನು ಮಾಡಿದ ಮನು ಮತ್ತು ಅರಣ್ಯಾನಿ ಇಬ್ಬರಿಗೂ ೨ ವರ್ಷ ಸಜೆ ೫೦೦ ರೂ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

ಪ್ರಕರಣದಲ್ಲಿ ನನಗೆ ಜಯವಾಗಿದೆ ಎನ್ನುವ ಸಂತೋಷ ಇದೆ ಆದರೂ ನನಗಾಗಿರುವ ನೋವು ಇನ್ನೊಬ್ಬರಿಗೆ ಆಗಬಾರದು ಎನ್ನುವ ಕಾರಣಕ್ಕೆ ಇಷ್ಟು ವರ್ಷ ಹೋರಾಟ ನಡೆಸಿದ್ದೇನೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಚುನಾವಣೆ ಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡರು ಈಗ ಏನು ಉತ್ತರ ಕೊಡುತ್ತಾರೋ ಗೊತ್ತಿಲ್ಲ. ನನ್ನ ಎರಡೂ ಬಾರಿ ಸೋಲಿಗೆ ಪ್ರಮುಖ ಪಾತ್ರ ವಹಿಸಿದ್ದು ಇದೇ ಪ್ರಕರಣ. ಅಲ್ಲದೆ ಇದನ್ನು ಇಲ್ಲದ ರೀತಿ ವೈಭವೀಕರಣ ಮಾಡಿದ ಪರಿಣಾಮ ತೊಂದರೆ ಆಗಿದೆ. ಆದರೂ ಅಂತಿಮವಾಗಿ ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯವಾಗಿದೆ. ಆದರೆ ಪ್ರಕರಣದಲ್ಲಿ ನಿರ್ದೇಶಕರು, ವಿತರಕರ ಪಾತ್ರ ವಹಿಸಿದವರಿಗೆ ಭಗವಂತನ ನ್ಯಾಯಾಲಯದಲ್ಲಿ ಶಿಕ್ಷೆ ಆಗಲಿದೆ. ಕಾದು ನೋಡುತ್ತೇವೆ ಎಂದರು.

ಇದರ ಪರಿಣಾಮ ಬಹಳ ದೊಡ್ಡದಾಗಿರುವ ಕಾರಣ ಚುನಾವಣೆ ಗೆಲುವಿಗಾಗಿ ಇಂತಹ ಕೀಳುಮಟ್ಟಕ್ಕೆ ಯಾರೂ ಇಳಿಯಬೇಡಿ ಎಂದು ಮನವಿ ಮಾಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಶೀಷ್ ಕುಮಾರ್ ಮತ್ತು ನಾಗರಾಜ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ ಹಾಜರಿದ್ದರು

Former minister D.N. Jeevaraj press conference

About Author

Leave a Reply

Your email address will not be published. Required fields are marked *