ಕಾರಾಬಂಧಿಗಳು ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು
ಚಿಕ್ಕಮಗಳೂರು: ಸಂವಿಧಾನಾತ್ಮಕವಾಗಿ ರಚನೆಗೊಂಡಿರುವ ಮಾನವ ಹಕ್ಕುಗಳ ಬಗ್ಗೆ ಅರಿವು ಹೊಂದುವ ಮೂಲಕ ಸಮಾಜದಲ್ಲಿ ಸಾತ್ವಿಕ ಜೀವನ ನಡೆಸಲು ಕಾರಾಬಂಧಿಗಳು ಮುಂದಾಗಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಆಫ್ ಲಾ, ಬೆಂಗಳೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಸಹಯೋಗದಲ್ಲಿ ಕಾರಾಬಂಧಿಗಳಿಗೆ ಏರ್ಪಡಿಸಿದ್ದ ’ನನ್ನ ಹಕ್ಕು, ನನ್ನ ಅರಿವು’ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನ ಚೌಕಟ್ಟಿನಲ್ಲಿರುವ ಹಕ್ಕುಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಆಕಸ್ಮಿಕ ತಪ್ಪಿನಿಂದ ಸೆರೆವಾಸ ಅನುಭವಿಸುವವರು ಮುಖ್ಯವಾಗಿ ಹಕ್ಕುಗಳ ಬಗ್ಗೆ ಅರಿವು ಹೊಂದಿದರೆ ಬಿಡುಗಡೆ ಬಳಿಕ ಸಮಾಜದಲ್ಲಿ ಎಲ್ಲರಂತೆ ಬಾಳಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.
ಕಾರಾಬಂಧಿಗಳಿಗೆ ಇಲಾಖೆಯಿಂದ ಅನೇಕ ಕೌಶಾಲ್ಯಾಭಿವೃದ್ದಿ ತರಬೇತಿ ನೀಡಲಾಗುತ್ತಿದೆ. ಇದು ಮುಂದಿನ ಜೀವನದಲ್ಲಿ ಬಹಳಷ್ಟು ಉಪಯೋಗವಾಗಲಿದೆ. ಅದಲ್ಲದೇ ಶಿಕ್ಷಣ, ಮಾನವ ಹಕ್ಕುಗಳು ಹಾಗೂ ಕಾರಾಬಂಧಿಯ ಕಾಯಕವೃತ್ತಿಯಲ್ಲಿ ಅಪರೂಪ ಕಲೆ ಹೊಂದಿದ್ದರೆ ಗುರುತಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ಇಲಾಖೆ ಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾನೂನಿನಡಿಯಲ್ಲಿ ಬಂಧಿಗಳಿಗೆ ಹಲವಾರು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಬಿಡುಗಡೆ ಬಳಿಕವು ಜೀವನಕ್ಕೆ ಮುನ್ನೆಡೆಸಲು ಸರ್ಕಾರದಿಂದ ಅನೇಕ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರಿಂದ ಮುಂದಿನ ಅವರ ಜೀವನ ಸ್ವಲ್ಪಮಟ್ಟಿನಲ್ಲಿ ಚೇತರಿಕೆ ಕಾಣಲು ಸಾಧ್ಯ ಎಂದು ಹೇಳಿದರು.
ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜು ಪ್ರಾಧ್ಯಾಪಕ ಪ್ರಿಯಾಂಕ್ ಜಗವಂಶಿ ಮಾತನಾಡಿ ಯಾವುದೋ ಉದ್ವೇಗದಿಂದ ತಪ್ಪನ್ನು ಎಸಗಿ ಕಾರಾಬಂಧಿಗಳಾಗಿದ್ದು ಯಾವುದೇ ಕಾರಣಕ್ಕೂ ಕೀಳರಿಮೆ ಹೊಂದ ಬಾರದು. ಬಿಡುಗಡೆ ಬಳಿಕ ಇನ್ನಷ್ಟು ದಿನಗಳು ಕುಟುಂಬ, ಸ್ನೇಹಿತರೊಂದಿಗೆ ಬಾಳಬೇಕು. ಕ್ರೀಯಾಶೀಲ ಚಟು ವಟಿಕೆಗಳತ್ತ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾರಾಗೃಹ ಜೈಲರ್ ಎಂ.ಕೆ.ನೆಲಧರಿ, ಸಿಬ್ಬಂದಿ ಮತ್ತಿತರರು ಹಾಜರಿದ್ದರು.
‘My Right My Awareness’ Program in District Jail