ದತ್ತ ಮಾಲಾ ಅಭಿಯಾನ ಪೂರ್ವ ಭಾವಿ ಸಭೆ
ಚಿಕ್ಕಮಗಳೂರು: ಅಕ್ಟೋಬರ್ ೩೦ ರಿಂದ ನವೆಂಬರ್ ೦೫ ರವರೆಗೆ ಆಚರಿಸಲಾಗುವ ದತ್ತ ಮಾಲಾ ಅಭಿಯಾನವನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ದತ್ತ ಮಾಲಾ ಅಭಿಯಾನದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದತ್ತ ಪೀಠಕ್ಕೆ ದರ್ಶನಕ್ಕೆ ಹೋಗುವ ಸಮಯ ಹಾಗೂ ಬರುವ ಸಮಯವನ್ನು ತಿಳಿಸಲಾಗುವುದು. ಗಿರಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಗಿರಿಯಲ್ಲಿ ವಾಹನಗಳ ದಟ್ಟಣೆ ಉಂಟಾಗುವುದರಿಂದ ಲಾಂಗ್ ಚಾರ್ಸಿ ವಾಹನಗಳನ್ನು ಬಳಸದಂತೆ ಹೇಳಿದರು.
ಅಕ್ಟೋಬರ್ ೩೦ ರಂದು ದತ್ತ ಮಾಲಾಧಾರಣೆ, ನವೆಂಬರ್ ೨ ರಂದು ದೀಪೋತ್ಸವವನ್ನು ಯಾವ ದೇವಾಲಯಗಳಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾಹಿತಿಯನ್ನು, ಹಾಗೂ ಎಷ್ಟು ಜನರು ಭಾಗವಹಿಸುತ್ತಾರೆ, ಬೇರೆ ಜಿಲ್ಲೆಗಳಿಂದ ದತ್ತ ಮಾಲಾಧಾರಿಗಳು ಯಾರ ನೇತೃತ್ವದಲ್ಲಿ ಬರುತ್ತಾರೆ, ಭಕ್ತಾಧಿಗಳು ಉಳಿಯುವ ಸ್ಥಳ, ಹೊರ ರಾಜ್ಯಗಳಿಂದ ಬರುವವರ ಮಾಹಿತಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆಯಾಗದಂತಹ ಹೇಳಿಕೆಗಳನ್ನು ಯಾರು ಕೊಡಬಾರದು, ಪೀಠದೊಳಗೆ ಯಾರು ಕೂಡ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಹಾಗೂ ಪೋಟೋ ತೆಗೆಯುವಂತಿಲ್ಲ. ಪೊಲೀಸ್ ಇಲಾಖೆಯಿಂದ ಸುರಕ್ಷತಾ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಉಪ ವಿಭಾಗಾಧಿಕಾರಿ ರಾಜೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ., ಚಿಕ್ಕಮಗಳೂರು ತಾಲ್ಲೂಕು ತಹಸೀಲ್ದಾರ್ ಡಾ. ಸುಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶ್ರೀರಾಮ ಸೇನೆಯ ಮುಖಂಡರು ಹಾಜರಿದ್ದರು.
Dutta Mala Abhiyan Pre-Bhavi Sabha