ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧ ಆರೋಪ
ಚಿಕ್ಕಮಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹತಾಶರಾಗಿರುವ ಪ್ರತಿಪಕ್ಷದ ಮುಖಂಡರು ಮಾನಸಿಕ ಅಸ್ವಸ್ಥರಂತೆ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಮಜ್ದೂರು ಘಟಕದ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಆರೋಪಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಕಳೆದ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರದ ಮೂಲಕ ಪ್ರತಿ ಹಂತದಲ್ಲೂ ಅವ್ಯಹಾರ ನಡೆಸಿದ್ದರು. ಜತೆಗೆ ಪರಸ್ಪರ ಧರ್ಮ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಶಾಂತಿಭಂಗ ಉಂಟು ಮಾಡಿದ್ದರು ಎಂದು ಆರೋಪಿಸಿದರು.
೨ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಯುವಕರನ್ನು ಬಜ್ಜಿ, ಬೋಂಡಾ, ಪಕೋಡಾ ಮಾರಿ ಎಂದು ಕೊನೆಗೆ ಹೇಳಿದರು. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿ ಒಂದು ವರ್ಷದ ನಂತರ ಕೆಲವರಿಗಷ್ಟೇ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ ಬೆಂಬಲ ಪಡೆದು ಸರಕಾರ ರಚಿಸಿ ಪ್ರತಿಯೊಂದು ಸಭೆಯಲ್ಲಿ ಕಣ್ಣೀರು ಸುರಿಸುತ್ತಾ ನಾಟಕವಾಡಿದರು ಎಂದು ಲೇವಡಿ ಮಾಡಿದರು.
೨೦ ತಿಂಗಳು ಸದನಕ್ಕೆ ಹಾಜರಾಗದೆ ಸ್ಟಾರ್ ಹೊಟೇಲ್ನಲ್ಲಿದ್ದುಕೊಂಡು ದಂಧೆ ನಡೆಸಿದರು. ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದರಿಂದ ಇವರನ್ನು ಜನರು ಮನೆಗೆ ಕಳುಹಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯತ್ತಿದೆ. ಐದೂ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡುವ ಮೂಲಕ ಚುನಾವಣೆಗೂ ಮುನ್ನ ನೀಡಿದ್ದ ವಾಗ್ದಾನವನ್ನು ಈಡೇರಿಸಿದ್ದಾರೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಮುಖಂಡರಾದ ಇರ್ಷಾದ್, ರಿಜ್ವಾನ್, ಫಾಸೀಲ್, ಸ್ವಾಕ್, ಜಗದೀಶ್ ಮತ್ತಿತರರಿದ್ದರು.
Frustrated by the defeat the opposition blamed the Congress