ಸ್ವರಬದ್ಧವಾಗಿರುವ ಭಾಷೆಯೆಂದರೆ ಕನ್ನಡ ಭಾಷೆ
ಚಿಕ್ಕಮಗಳೂರು: ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ವಿಲೀನಗೊಂಡಿದ್ದಂತಹ ಕನ್ನಡ ನಾಡನ್ನು ಒಗ್ಗೂಡಿಸಿ ಏಕೀಕರಣಗೊಂಡಂತಹ ಸುದಿನ ಇಂದಿನ ಕನ್ನಡ ರಾಜ್ಯೋತ್ಸವ ಎಂದು ಐ.ಡಿ.ಎಸ್.ಜಿ ಕಾಲೇಜಿನ ಎಚ್.ಓ.ಡಿ ಡಾ. ಪುಷ್ವಭಾರತಿ ತಿಳಿಸಿದರು.
ನಗರದ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು ಮೊದಲು ಹೈದರಾಬಾದ್, ಮುಂಬಯಿ ಹಾಗೂ ಮದ್ರಾಸ್ ಭಾಗಗಳಲ್ಲಿ ವಿಲೀನ ವಾಗಿತ್ತು. ನಂತರ ಎಲ್ಲಾ ಭಾಗಗಳನ್ನು ಒಗ್ಗೂಡಿಸುವ ಮೂಲಕ ಏಕೀಕರಣಗೊಳಿಸಿ ಪೂರ್ಣವಾಗಿ ಕರ್ನಾಟಕವಾಗಿ ಉದಯವಾಯಿತು ಎಂದು ತಿಳಿಸಿದರು.
ಸ್ವರಬದ್ಧವಾಗಿರುವ ಭಾಷೆಯೆಂದರೆ ಕನ್ನಡ ಭಾಷೆ, ಅದನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇತರೆ ರಾಜ್ಯಗಳಿಂದ ಆಗಮಿಸುವವರಿಗೆ ಕನ್ನಡದ ಅರಿವನ್ನು ಮೂಡಿಸಬೇಕು ಜೊತೆಗೆ ಭಾಷೆ ಕಲಿಕೆಯ ಬಗ್ಗೆ ಆಸಕ್ತಿ ಬೆಳೆಸಲು ಕನ್ನಡಿಗರು ಪ್ರಯತ್ನಿಸಬೇಕು ಎಂದರು.
ಇಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಯಿದೆ. ಇದಕ್ಕೆ ಮೂಲ ಕಾರಣ ಭಾಷೆಯ ಮೇಲೆ ಕನ್ನಡಿಗರು ಅಭಿಮಾನ ತೋರದಿರುವುದು. ಆ ನಿಟ್ಟಿನಲ್ಲಿ ಎಲ್ಲಾ ಭಾಷೆಗಳನ್ನು ಕಲಿಯೋಣ ಜೊತೆಗೆ ಎಂದಿಗೂ ಕನ್ನಡ ಭಾಷೆಯನ್ನು ಮರೆಯದಂತೆ ಬದುಕೋಣ ಎನ್ನುವ ನೀತಿ ಪಾಠವನ್ನು ಅರಿತಿಕೊಂಡಿರಬೇಕು ಎಂದರು.
ನರ್ಚರ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಟಿ.ಸುಜಾತ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ, ಇಂದಿನ ಯುವಪೀಳಿಗೆಯು ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಹೊಂದಿರಬೇಕು. ಆಗ ಮಾತ್ರ ಕನ್ನಡವನ್ನು ಬೆಳೆಸಲು ಸಾಧ್ಯ ಎಂದ ಅವರು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲಾದ ಸುಪ್ರಿಯ, ಆಡಳಿತಾಧಿಕಾರಿ ರಾಕೇಶ್, ಮತ್ತಿತರರಿದ್ದರು.
68th Kannada Rajyotsava at Nurture International School