ವರಸಿದ್ಧಿ ವೇಣುಗೋಪಾಲ್ ಕೆಳಗಿಳಿಸಲು ಅವಿಶ್ವಾಸಕ್ಕೆ ಬೆಂಬಲ
ಚಿಕ್ಕಮಗಳೂರು: ಕೋಮುವಾದಿ ಆಡಳಿತ ನಡೆಸುತ್ತಾ ಮುಸಲ್ಮಾನರು ಮತ್ತು ದಲಿತರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಲುವಾಗಿ ಅವಿಶ್ವಾಸ ನಿರ್ಣಯಕ್ಕೆ ಎಸ್.ಡಿ.ಪಿ.ಐ ಬೆಂಬಲಿಸಿದೆ ಎಂದು ಜಿಲ್ಲಾಧ್ಯಕ್ಷ ಗೌಸ್ ಮುನೀರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಡಿ.ಪಿ.ಐ ಸಿದ್ದಾಂತವೇ ಬೇರೆ ಕೋಮುವಾದಿ ಬಿಜೆಪಿ ಸಿದ್ಧಾಂತವೇ ಬೇರೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಆದರೆ ಕಾಂಗ್ರೆಸ್ ಪಕ್ಷದವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವರಸಿದ್ಧಿ ವೇಣುಗೋಪಾಲ್ ಅವರ ನಗರಸಭಾ ಅಧ್ಯಕ್ಷರಾದಾಗಿನಿಂದ ಭ್ರ?ಚಾರದಲ್ಲಿ ಮುಳುಗಿದ್ದು ಬುಲ್ಡೋಜರ್ ಮೂಲಕ ಮುಸಲ್ಮಾನರು ಮತ್ತು ದಲಿತ ಸಮುದಾಯದ ಕಟ್ಟಡಗಳನ್ನು ಒಡೆಯುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ ಬುಲ್ಡೋಜರ್ ಬಾಬಾ ಎನ್ನಿಸಿಕೊಳ್ಳಲು ಕೋಮು ರಾಜಕೀಯ ನಡೆಸುತ್ತಿದ್ದಾರೆ ತಮ್ಮ ಪಕ್ಷ ಹಿಂದಿನಿಂದಲೂ ಇದರ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ನಗರ ಸಭೆಯಲ್ಲಿ ತಮ್ಮ ಪಕ್ಷದ ಏಕೈಕ ಸದಸ್ಯರಿದ್ದು ವರಸಿದ್ಧಿ ವೇಣುಗೋಪಾಲ್ ಅಥವಾ ಬಿಜೆಪಿ ಪಕ್ಷಕ್ಕೆ ಎಸ್ಡಿಪಿಐ ಬೆಂಬಲ ಸಿಗುವುದಿಲ್ಲ ಅವರನ್ನು ಅಧಿಕಾರದಿಂದ ಇಳಿಸುವ ಏಕೈಕ ಉದ್ದೇಶದಿಂದ ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿ ಬೆಂಬಲ ನೀಡಲಾಗುವುದು ನಂತರ ಬಿಜೆಪಿಗೆ ಎಸ್ಡಿಪಿಐ ಬೆಂಬಲ ಇರುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಚುನಾವಣೆ ಪ್ರಾರಂಭದಲ್ಲಿ ಬಿಜೆಪಿ ಕೆಲ ಸದಸ್ಯರನ್ನು ಸೇರಿಸಿಕೊಂಡು ನಗರಸಭೆ ಆಡಳಿತ ಹಿಡಿಯುವುದಾಗಿ ಶಾಸಕ ಎಸ್.ಡಿ ತಮ್ಮಯ್ಯ ಅವರು ಹೇಳಿದ್ದರು. ಆ ಪ್ರಯತ್ನವಾಗಿ ಅಥವಾ ಇನ್ನೂ ಯಾವುದೇ ರೀತಿಯಿಂದ ನಗರಸಭೆಯಲ್ಲಿ ಬಿಜೆಪಿ ಆಡಳಿತವನ್ನು ಬದಲಿಸಲು ಮುಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಮಂಜುಳಾಶ್ರೀನಿವಾಸ್, ಎಸ್.ಡಿ.ಪಿ.ಐ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಅಭಿಜಿತ್, ಅಕ್ರಮ್ ಮತ್ತಿತ್ತರರಿದ್ದರು.
SDPI district president Gous Muneer press conference