ಡಾ. ಬಿ.ಆರ್ ಅಂಬೇಡ್ಕರ್ ಯಾವುದೋ ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಯಾವುದೋ ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಅವರು ಎಲ್ಲ ಸಮುದಾಯಕ್ಕೂ ಸೇರಿದವರು. ಮಹಿಳೆಯರಿಗೆ ಮತದಾನದ ಹಕ್ಕನ್ನು ದೊರಕಿಸಿಕೊಟ್ಟವರು ಅವರು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನವೆಂಬರ್ 07 ರಂದು ಶಾಲೆಗೆ ಸೇರಿದ ದಿನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ನಗರಸಭೆಯಲ್ಲಿ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾದ ನವೆಂಬರ್ 7ರಂದು ಪ್ರತಿಭಾ ಪುರಸ್ಕಾರ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು.
ಅಂಬೇಡ್ಕರ್ ಅವರನ್ನು ಭಾರತ ಮಾತ್ರವಲ್ಲ ಅವರನ್ನು ಇಡೀ ಪ್ರಪಂಚ ಗೌರವಿಸುತ್ತದೆ ಅವರ ಸಂವಿಧಾನ ಕೇವಲ ಭಾರತಕ್ಕಲ್ಲ ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ ಇಡೀ ಪ್ರಪಂಚ ಭಾರತದ ಕಡೆ ತಿರುಗುವ ಹಾಗೆ ಅವರು ಮಾಡಿದ್ದಾರೆ ಎಂದು ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಮಹಾನ್ ದಾರ್ಶನಿಕರು. ಅವರ ಸಾಲಿನಲ್ಲಿ ಅಂಬೇಡ್ಕರ್ ಅವರು ಮೊದಲಿಗರಾಗಿ ನಿಲ್ಲುತ್ತಾರೆ ಅಂಬೇಡ್ಕರ್ ಅವರು ಹುಟ್ಟದಿದ್ದರೆ ನಾವೆಲ್ಲ ನಗರಸಭೆ ಒಳಗೆ ಕೂರುವುದಿರಲಿ ಕಾಂಪೌಂಡ್ ಒಳಗೆ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು ಸಂಪೂರ್ಣವಾಗಿ ನಡೆಯಲು ಸಾಧ್ಯವಾಗದಿದ್ದರೂ ಅವರ ವಿಚಾರಧಾರೆಗಳನ್ನಾದರೂ ಅಳವಡಿಸಿಕೊಂಡರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದ ಅವರು ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಪಡೆದವರು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು. ಕೆಳ ವರ್ಗದ ಜನರಿಗೆ ಇನ್ನೂ ಸಂಪೂರ್ಣವಾಗಿ ನ್ಯಾಯ ಸಿಕ್ಕಿಲ್ಲ ಅದನ್ನು ಅವರಿಗೆ ಸಂಪೂರ್ಣವಾಗಿ ದೊರಕಿಸಿಕೊಟ್ಟಾಗ ಮಾತ್ರ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಮಾಜಿ ಸಚಿವ ಡಿ.ಬಿ ಚಂದ್ರೇಗೌಡರು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗಾಗಿ ಲೋಕಸಭಾ ಸದಸ್ಯತ್ವವನ್ನು ತ್ಯಾಗ ಮಾಡಿದವರು ಅವರು ನಮ್ಮ ಜಿಲ್ಲೆಯವರು ನಮ್ಮ ನಾಯಕರು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಅವರ ಸಾವಿನಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಬಡ ಸಫಾಯಿ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮವಾದ ಕಾರ್ಯ ಇದು ಬಹಳ ಒಳ್ಳೆಯ ಕಾರ್ಯಕ್ರಮ ಎಂದು ಹೇಳಿದರು. ಸಫಾಯಿ ಕರ್ಮಚಾರಿ ಜಾಗೃತ ದಳದ ಸದಸ್ಯ ಕೆ.ಟಿ. ರಾಧಕೃಷ್ಣ ಮಾತನಾಡಿದರು. ಸಫಾಯಿ ಕರ್ಮಚಾರಿ ಜಾಗೃತ ಸಮಿತಿ ಅಧ್ಯಕ್ಷ ವೆಂಕಟೇಶ್ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಸಫಾಯಿ ಕರ್ಮಚಾರಿ ಜಾಗೃತ ದಳದ ಸದಸ್ಯೆ ಶೀಲಾ ಸುರೇಶ್, ನಗರ ಯೋಜನಾಧಿಕಾರಿ ನಾಗರತ್ನ, ನಗರಸಭೆ ಪೌರಾಯುಕ್ತ ಬಸವರಾಜ್ ಉಪಸ್ಥಿತರಿದ್ದರು.
Pratibha Puraskar program held in Municipal Council