ಒಂಟ ಸಲಗದ ಮದ ಇಳಿಸಲು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಆಗಮನ
ಚಿಕ್ಕಮಗಳೂರು: ಎರಡು ತಿಂಗಳಲ್ಲಿ ಇಬ್ಬರನ್ನು ಹತ್ಯೆ ಮಾಡಿ ಮದ ಏರಿಸಿಕೊಂಡು ಅಲೆದಾಡುತ್ತಿರುವ ಒಂಟ ಸಲಗದ ಮದ ಇಳಿಸಲು ಅಭಿಮನ್ಯು ಮತ್ತು ಮಹೇಂದ್ರ ಬಂದಿಳಿದಿದ್ದಾರೆ.
ದೈಹಿಕವಾಗಿ ಬಲಿಷ್ಠವಾಗಿರುವ ಪುಂಡಾನೆ ಪತ್ತೆ ಮಾಡಿ ಅದಕ್ಕೆ ಅರವಳಿಕೆ ನೀಡಲು ಹೋದಾಗ ಅದು ನೀಡುವ ಸವಾಲುಗಳನ್ನು ಎದುರಿಸಲು ಬೇರೆಲ್ಲಾ ಸಾಕಾನೆಗಳಿಂದ ಸಾಧ್ಯವಿಲ್ಲ. ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಪಳಗಿದ ಎರಡು ಬಲಿಷ್ಠ ಸಾಕಾನೆಗಳನ್ನು(ಅಭಿಮನ್ಯು ಮತ್ತು ಮಹೇಂದ್ರ) ಅರಣ್ಯ ಇಲಾಖೆ ಅಧಿಕಾರಿಗಳು ಕರೆಸಿದ್ದಾರೆ.
ಸಕ್ರೈಬೈಲಿನಿಂದ ಬಂದಿದ್ದ ಮೂರು ಆನೆ, ದುಬಾರೆ ಬಿಡಾರದಿಂದ ನಾಲ್ಕು ಆನೆಗಳ ಜತೆಗೆ ಅಭಿಮನ್ಯು ಮತ್ತು ಮಹೇಂದ್ರ ಸೇರಿಕೊಂಡಿದ್ದಾರೆ. ಮೂರ್ನಾಲ್ಕು ದಿನಗಳಿಂದ ಪುಂಡಾನೆ ಬೆನ್ನತ್ತಿ ಸುಸ್ತಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅದರ ಚಲನವಲನ ಗಮನಿಸಿ ಮದ ಏರಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಕಾರ್ಯಾಚರಣೆ ತಂಡದ ಮೇಲೆ ಎರಗಲು ಪುಂಡಾನೆ ಮುಂದಾದರೆ, ರಕ್ಷಣೆ ಮಾಡಲು ಬೇರೆ ಆನೆಗಳಿಂದ ಸಾಧ್ಯವಿಲ್ಲ. ಆದ್ದರಿಂದ ದಸರಾ ಆನೆಗಳನ್ನು ಕರೆಸಲಾಗಿದೆ. ಯಾವುದೇ ಕ್ಲಿಷ್ಟಕರ ಸಂದರ್ಭ ಬಂದರೂ ನಿಭಾಯಿಸುವ ಸಾಮರ್ಥ್ಯವನ್ನು ಅಭಿಮನ್ಯ ಹೊಂದಿದ್ದಾನೆ. ಈಗ ಕಾರ್ಯಾಚರಣೆ ತಂಡಕ್ಕೆ ದೊಡ್ಡ ಬಲ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಮೂಡಿಗೆರೆ ತಾಲ್ಲೂಕಿನ ಬಿ.ಹೊಸಳ್ಳಿಯ ದೊಡ್ಡಳ್ಳಕ್ಕೆ 9 ಸಾಕಾನೆಗಳು ಬಂದಿಳಿದಿವೆ.
ದಾಳಿ ನಡೆಸಿದ ಕಾಡಾನೆಯು ಚಂಡಗೋಡು, ಕಂಚಿಕಲ್ ದುರ್ಗಾ, ಕುಂದೂರು ಭಾಗದಲ್ಲಿ ಸಂಚರಿಸುತ್ತಿರುವ ಮಾಹಿತಿ ಇದ್ದು, ಕಾರ್ಯಚರಣೆಗೆ ಬಂದಿರುವ ಸಾಕಾನೆಗಳನ್ನು ಕುಂದೂರು ಸಮೀಪದ ದೊಡ್ಡಳ್ಳದಲ್ಲಿ ಇಳಿಸಲಾಗಿದೆ. ಮಾವುತರು, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸಲಾಯಿತು.
ಭಾನುವಾರ ಮಧ್ಯಾಹ್ನದ ವೇಳೆಗೆ ಕಾಡಾನೆಯು ಕೆಂಜಿಗೆ ಮೀಸಲು ಅರಣ್ಯದ ಬಸನಿ ಅರಣ್ಯದಲ್ಲಿದೆ ಎಂಬ ಮಾಹಿತಿ ಬಂದಿದ್ದರಿಂದ ಸಾಕಾನೆಗಳನ್ನು ಲಾರಿ ಮೂಲಕ ಕರೆದೊಯ್ಯಲಾಗಿತ್ತು. ಆದರೆ, ಕಾಡಾನೆಯ ಸುಳಿವು ಸಿಗದ ಕಾರಣ ಸಂಜೆ ವೇಳೆಗೆ ಸಾಕಾನೆಗಳನ್ನು ತಾತ್ಕಾಲಿಕ ಶಿಬಿರಕ್ಕೆ ಕರೆ ತರಲಾಯಿತು.
ಸಾಕಾನೆಗಳು ಬರುತ್ತಿದ್ದಂತೆ ಅವುಗಳನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು.