ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 5.50 ಲಕ್ಷ ರೂ ಮೌಲ್ಯದ ರಸಗೊಬ್ಬರ ವಶ
ಚಿಕ್ಕಮಗಳೂರು: ಜಿಲ್ಲೆಯ ರೈತರ ಹೆಸರಿನಲ್ಲಿ ರಸಗೊಬ್ಬರ ಪಡೆದು ಕೇರಳ ರಾಜ್ಯದ ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೃಷಿ ಇಲಾಖೆಯ ಜಾಗೃತದಳ ಯಶಸ್ವಿಯಾಗಿದೆ
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಚೆಕ್ ಪೋಸ್ಟ್ನಲ್ಲಿರುವ ಶ್ರೀ ಸಿದ್ಧಿ ವಿನಾಯಕ ಆಗ್ರೋ ಸೆಂಟರ್ನ ಮಾಲೀಕ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಿ ಎನ್. ಮಧುಸೂಧನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ೩೩೭ ರಸಗೊಬ್ಬರ ಹಾಗೂ ಕೇರಳ ಮೂಲದ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ರಸಗೊಬ್ಬರದ ಒಟ್ಟು ಮೌಲ್ಯ ೫.೫೦ ಲಕ್ಷ ರುಪಾಯಿ ಎಂದು ಹೇಳಲಾಗುತ್ತಿದೆ.
ಐಪಿಎಲ್ ಕಂಪನಿಗೆ ಸೇರಿದ ೩೧೧, ಎಂಸಿಎಫ್ ಹಾಗೂ ಸ್ಪಿಕ್ ಕಂಪನಿಗೆ ಸೇರಿದ ೨೬ ಚೀಲ ಯೂರಿಯಾ ರಸಗೊಬ್ಬರವನ್ನು ಹಾಸನದ ಅಕ್ಷಯ ಟ್ರೇಡಿಂಗ್ ಕಂಪನಿಯಿಂದ ಮಧುಸೂಧನ್ ಅವರು ತರಿಸಿಕೊಂಡಿದ್ದು, ಲಾರಿಯಲ್ಲಿ ಬಂದ ರಸಗೊಬ್ಬರವನ್ನು ಕೇರಳ ರಾಜ್ಯದ ನೋಂದಣಿ ಇರುವ ಲಾರಿಯಲ್ಲಿ ತುಂಬಿಸಿ ಕಳುಹಿಸುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಕೃಷಿ ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಎಸ್. ವೆಂಕಟೇಶ್ ಚವ್ಹಾಣ್ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ರಸಗೊಬ್ಬರ ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡರು.
ಸಹಾಯಕ ಕೃಷಿ ನಿರ್ದೇಶಕ ಎಸ್. ವೆಂಕಟೇಶ್ ಚವ್ಹಾಣ್ ನೀಡಿರುವ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಸ್ಪೆಕ್ಟರ್ ವೈ.ಎಸ್. ಶಶಿಕುಮಾರ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ಮಧುಸೂಧನ್ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
Fertilizer worth Rs 5.50 lakh seized illegally