ವಕೀಲರ ಮೇಲಿನ ಹಲ್ಲೆ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಮನವಿ
ಚಿಕ್ಕಮಗಳೂರು: ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಚಿಕ್ಕಮಗಳೂರು ಬಾರ್ ಅಸೋಸಿಯೇ?ನ್ ಮನವಿ ಸಲ್ಲಿಸಿದೆ.
ವಕೀಲರ ಸಂಘದ ಸದಸ್ಯ ಪ್ರೀತಮ್ ಎಂಬುವವರು ನ.೩೦ ರಂದು ಸಂಜೆ ಸುಮಾರು ೭.೩೦ ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರ ಠಾಣಾ ಮುಂಭಾಗದಲ್ಲಿ ತಮ್ಮ ಮೋಟರ್ ಬೈಕಿನಲ್ಲಿ ಹೋಗುತ್ತಿದ್ದಾಗ ಅನಾಮದೇಯ ವ್ಯಕ್ತಿಯೊಬ್ಬ ತಡೆದು ಹೆಲ್ಮೆಟ್ ಧರಿಸಿಲ್ಲ ಎಂದು ವಕೀಲರ ಬೈಕ್ನ ಕೀ ಕಸಿದು, ವಕೀಲರು ಹೆಲ್ಮೆಟ್ ಧರಿಸದಿದ್ದಕ್ಕೆ ದಂಡ ಕಟ್ಟುತ್ತೇನೆಂದು ತಿಳಿಸಿದರೂ ಸಹ ವಕೀಲ ವೃತ್ತಿಯನ್ನು ನಿಂದಿಸಿ ಸದರಿ ಪ್ರೀತಮ್ ರವರ ಮೇಲೆ ನಗರ ಠಾಣಾ ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ನಗರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಮೊಕದ್ದಮೆ ಸಂ.೨೧೫/೨೦೨೩ ರಂತೆ ಕಲಂ.೫೦೬, ೩೪೧, ೩೦೭, ೩೨೪, ೩೨೬, ೫೦೪, ೧೪೯ ಐಪಿಸಿ ಅಡಿ ಪ್ರಕರಣ ದಾಖಲಾಗಿದ್ದರೂ ಸಹ ಯಾವೊಬ್ಬ ಆರೋಪಿಯನ್ನು ಇದುವರೆಗೂ ತನಿಖಾಧಿಕಾರಿಗಳು ಬಂಧಿಸಿರುವುದಿಲ್ಲ. ಆರೋಪಿತರನ್ನು ಬಂಧಿಸುವಂತೆ ವಕೀಲರು ಮನವಿ ಮಾಡಿದು, ನಂತರದಲ್ಲಿ ಪೋಲೀಸ್ ಸಿಬ್ಬಂದಿಗಳು ದಿನಾಂಕ ಡಿ.೨ ರಂದು ರಾತ್ರಿ ಸಮವಸ್ತ್ರದಲ್ಲಿಯೇ ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪೊಲೀಸ್ ಸಮವಸ್ತ್ರದ ಒಂದು ಭಾಗವಾದ ಲಾಠಿಯನ್ನು ಸುಡುವುದರ ಮುಖಾಂತರ ಸಾರ್ವಜನಿಕರ ಆಸ್ತಿಯನ್ನು ನ? ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾನೂನು ಬಾಹಿರ ಪ್ರತಿಭಟನೆಯನ್ನು ಮಾಡಿದ್ದು ಈ ಸಮಯದಲ್ಲಿ ಕೆಲ ಪೋಲೀಸ್ ಸಿಬ್ಬಂದಿಗಳು ಸಮವಸ್ತ್ರದಲ್ಲಿದ್ದು ವಕೀಲರ ಮನೆಗೆ ನುಗ್ಗಿ ಒಬ್ಬೊಬ್ಬರನ್ನು ಎಳೆದು ಹೊಡೆಯುವುದಾಗಿ ಬೆದರಿಕೆ ಹಾಕಿರುತ್ತಾರೆ ಹಾಗೂ ಕೆಲವೊಬ್ಬ ಪೋಲೀಸರು ಅವಾಚ್ಯ ಶಬ್ದಗಳಿಂದ ವಕೀಲರನ್ನು ಮತ್ತು ಅವರ ವೃತ್ತಿಯನ್ನು ನಿಂದಿಸಿ ತೊಡೆತಟ್ಟಿ ಕಾಳಗಕ್ಕೆ ಬರುವಂತೆ ಪ್ರಚೋದಿಸಿ ಜೀವ ಬೆದರಿಕೆ ಹಾಕುವಂತಹ ಪದಗಳನ್ನು ಬಳಸಿದ್ದಾರೆ ಎಂದು ದೂರಿದ್ದಾರೆ.
ಈ ಎಲ್ಲಾ ಅಂಶಗಳು ಮುಖ್ಯ ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಜಿಲ್ಲಾಡಳಿತವಾಗಲೀ, ರಾಜ್ಯ ಸರ್ಕಾರವಾಗಲಿ ಸಂಬಂಧಪಟ್ಟ ಇಲಾಖೆಗಳಾಗಲೀ ಕಾನೂನು ಮೀರಿ ಗೂಂಡಾ ರೀತಿ ವರ್ತಿಸಿದ ಪೋಲೀಸರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಸರ್ಕಾರದ ಅನುಮತಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಎಸ್ಮಾ ಕಾಯ್ದೆ ಉಲ್ಲಂಘಿಸಿ ಪ್ರತಿಭಟನೆ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಕೀಲರ ಮನೆಗಳಿಗೆ ನುಗ್ಗಿ ಒಬ್ಬೊಬ್ಬರನ್ನೇ ಹೊಡೆಯುವುದಾಗಿ ಬೆದರಿಕೆ ಹಾಕಿರುವ ಪೋಲೀಸರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಸಮವಸ್ತ್ರದಲ್ಲಿಯೇ ತೊಡೆತಟ್ಟಿ ಹೋರಾಟಕ್ಕೆ ಆಹ್ವಾನ ನೀಡಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪೋಲೀಸ್ ಸಮವಸ್ತ್ರದ ಒಂದು ಭಾಗವಾಗಿರುವ ಲಾಠಿಯನ್ನು ಸುಡುವುದರ ಮುಖಾಂತರ ಸಾರ್ವಜನಿಕ ಆಸ್ತಿಹಾನಿಮಾಡಿ ಸರ್ಕಾರದ ಘನತೆಗೆ ಅಗೌರವ ತೋರಿರುವ ಪೋಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರುಗಳಾದ ಪಿ.ಪರಮೇಶ್ವರ್, ಸಹ ಕಾರ್ಯದರ್ಶಿ ಕೆ.ಆರ್ ಪ್ರದೀಪ್, ಕಾರ್ಯದರ್ಶಿ ಸಿ.ಬಿ ರುದ್ರೇಶ್, ಉಪಾಧ್ಯಕ್ಷರಾದ ಕೆ.ಬಿ ನಂದೀಶ್ ಇದ್ದರು.
Chikmagalur Bar Association Petition