ಯುವ ಮತದಾರರ ನೊಂದಣಿ ಅಭಿಯಾನ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಯುವ ಮತದಾರರ ನೊಂದಣಿ ಅಭಿಯಾನ ನಡೆಯುತ್ತಿದ್ದು, ೧೮ ವರ್ಷಗಳ ಅರ್ಹತಾ ವಯಸ್ಸನ್ನು ಪೂರ್ಣಗೊಳಿಸಿರುವ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ೧೮ ವರ್ಷ ಪೂರ್ಣಗೊಳಿಸಿರುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಬಂಧ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದವಿ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಪದವಿ ಹಾಸ್ಟೇಲ್ಗಳಲ್ಲಿರುವ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು. ಚುನಾವಣಾ ಆಯೋಗವು ಪ್ರತಿ ವರ್ಷ ೪ ಅರ್ಹತಾ ದಿನವನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿ ಪಡಿಸಿದೆ. ಪ್ರತಿ ವರ್ಷ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳ ೦೧ ನೇ ತಾರೀಖು ೧೮ ವರ್ಷ ಪೂರ್ತಿಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ.
ಪ್ರಸ್ತಕ ಸಾಲಿನಲ್ಲಿ ಯುವ ಮತದಾರರ ಹೆಸರು ಸೇರ್ಪಡೆಗೆ ಡಿಸೆಂಬರ್ ೦೯ ಕೊನೆಯ ದಿನಾಂಕವಾಗಿದೆ. ಮತದಾರರು ಸ್ಟೋರ್ನಿಂದ ಡೌನ್ ಲೋಡ್ ಮಾಡಿ ಫಾರಂ ೬ ಸಲ್ಲಿಸಬಹುದು. ಮತದಾರರು ವೆಬ್ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು. ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪದವಿ ಹಾಸ್ಟೇಲ್ಗಳ ನಿಲಯ ಪಾಲಕರು ಮತದಾರರ ಪಟ್ಟಿಗೆ ಹೆಸರು ಸೇರಿಸುವ ಸಂಬಂಧ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ರಾಜ್ಯ ಮಟ್ಟದ ಚುನಾವಣಾ ತರಬೇತುದಾರ ಕಾಂತರಾಜು ಕೆ.ಜೆ. ಸಭೆಗೆ ಮಾಹಿತಿ ನೀಡಿ ಮತದಾರರ ಪಟ್ಟಿಗೆ ಇವರೆಗೂ ನೋಂದಾಯಿಸದ ಅರ್ಹ ವಯಸ್ಸಿನ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ನಮೂನೆ ೬ರಲ್ಲಿ ವಿವರಗಳನ್ನು ತುಂಬಿ ಅಗತ್ಯ ಪೂರಕ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು. ನಮೂನೆ ೬ ನ್ನು ಸಲ್ಲಿಸಲು ಹಾರ್ಡ್ ಪ್ರತಿಯನ್ನು ಸಲ್ಲಿಸಬಹುದು. ಮಾಹಿತಿಯನ್ನು ಭರ್ತಿ ಮಾಡಿ ಜನ್ಮ ದಿನಾಂಕ ಮತ್ತು ಸಾಮಾನ್ಯ ವಾಸ ಸ್ಥಳ ದೃಢೀಕರಿಸುವ ದಾಖಲೆಯ ಪ್ರತಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೀಶ್ ಹಾಗೂ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.
Youth Voter Registration Campaign