Be aware of the laws: ಜೀವನಕ್ಕೆ ಅವಶ್ಯವಾದ ಕಾನೂನುಗಳ ಅರಿವಿರಬೇಕು
ಚಿಕ್ಕಮಗಳೂರು: ಜೀವನಕ್ಕೆ ಅವಶ್ಯವಾದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂಬುವ ಉದ್ದೇಶದಿಂದ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಎಸ್.ಸೋಮ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಾಗರೀಕ ಸಬಲೀಕರಣಕ್ಕಾಗಿ ಕಾನೂನು ಅರಿವು ಅಭಿಯಾನ ಕಾರ್ಯಕ್ರಮವನ್ನು ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಯಾವುದೋ ಪರಿಸ್ಥಿತಿಯ ಒತ್ತಡ ಅಥವಾ ಸಂದರ್ಭೋಚಿತವಾಗಿ ವ್ಯಕ್ತಿಗಳು ತಪ್ಪು ಮಾಡುತ್ತಾರೆ. ತಪ್ಪಿತಸ್ಥರು ಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎನ್ನುವ ಉದ್ದೇಶದಿಂದ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.
ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ತಿಳುವಳಿಕೆ ಇರಬೇಕು ಎನ್ನುವ ಉದ್ದೇಶದಿಂದ ಕಾನೂನಿನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಮಾತನಾಡಿ ಅಪರಾಧಿಗಳು ತಮ್ಮ ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು. ಜೊತೆಗೆ ಯಾವುದರ ಬಗ್ಗೆ ಕೀಳರಿಮೆ ಪಟ್ಟುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಾರಾಬಂಧಿಯಿಂದ ಬಿಡುಗಡೆಯಾಗುವ ವ್ಯಕ್ತಿಗಳು ಕಾರಾಗೃಹದಲ್ಲಿ ನೀಡಿದಂತಹ ತರಬೇತಿಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕುವುದನ್ನು ಕಲಿಯಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಯಾವುದೇ ತಪ್ಪುಗಳನ್ನು ಮಾಡದೇ ಸಾತ್ವಿಕ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರುಗಳಾದ ತೇಜಸ್ವಿ, ದೊಡ್ಡಯ್ಯ, ರೂಪ, ಜೈಲರ್ ನಲದರಿ ಸೇರಿದಂತೆ ಕಾರಾಗೃಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be aware of the laws