ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ವಿರುದ್ದ ಪ್ರತಿಭಟನೆ
ಚಿಕ್ಕಮಗಳೂರು: ನವದೆಹಲಿಯ ನೂತನ ಸಂಸತ್ ಭವನದಲ್ಲಿ ಡಿ.೧೩ರಂದು ಜರುಗಿದ ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೇಸ್ ನೇತೃತ್ವದಲ್ಲಿ ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕು ಕಛೇರಿ ಆವರಣದಿಂದ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ವಿರುದ್ದ ಫ್ಲೇಕಾರ್ಡ್ ಹಿಡಿದು ಘೋಷಣೆಗಳನ್ನು ಕೂಗುತ್ತಾ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ಪಿ ಅಂಶುಮಂತ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಸಮಾವೇಶಗೊಂಡ ಕಾಂಗ್ರೇಸ್ ಕಾರ್ಯಕರ್ತರನ್ನು ಉದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಮಾತನಾಡಿ ಸಂಸತ್ ಭವನ ಎಂದರೇ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವಿದ್ದಂತೆ ಇಂತಹ ಪವಿತ್ರ ಸ್ಥಳದ ರಕ್ಷಣೆ ನೀಡುವಲ್ಲಿ ಆಡಳಿತಾರೂಢ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಈ ಕೃತ್ಯದಲ್ಲಿ ಭಾಗಿದಾರರಾದ ಆರೋಪಿಗಳೊಂದಿಗೆ ಮೈಸೂರು ಸಂಸದ ಪ್ರತಾಪ್ಸಿಂಹರನ್ನು ಸಹ ತನಿಖೆಗೊಳಪಡಿಸಿ ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದೇಶದಾದ್ಯಂತವಿರುವ ಜನಪ್ರತಿನಿಧಿಗಳು ಸೇರುವ ಅತ್ಯಾಮೂಲ್ಯ ಸ್ಥಳಕ್ಕೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ದೇಶದ ರಕ್ಷಣೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಗುಪ್ತಚರ ವ್ಯವಸ್ಥೆಯ ವೈಫಲ್ಯದಿಂದ ಈ ಅವಘಡ ಸಂಭವಿಸಿದ್ದು ಇದು ಸರ್ಕಾರದ ವಿಫಲವು ಹೌದು ಎಂದು ಹೇಳಿದ ಅವರು ಈ ಕುಕೃತ್ಯದಲ್ಲಿ ಭಾಗವಹಿಸಿದ ಆರೋಪಿಗಳು ಕಳೆದ ೬ ತಿಂಗಳ ಹಿಂದೆಯು ಸಂಸತ್ ಭವನಕ್ಕೆ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆಯ ನ್ಯೂನತೆಯನ್ನು ಅರಿತುಕೊಂಡು ಭಯೋತ್ಪಾದನಾ ಕೃತ್ಯವನ್ನು ನಡೆಸಿದ್ದಾರೆ ಎಂದು ಹೇಳಿ ದರು.
ಈ ಹಿಂದೆಯು ಬಿಜೆಪಿಯ ಆಡಳಿತಾವಧಿಯಲ್ಲಿ ಸಂಸತ್ಗೆ ನುಗ್ಗಿ ಭಯೋತ್ಪಾದಕರು ಅಟ್ಟಹಾಸ ಮರೆದಿದ್ದರು ಆ ಕರಾಳತೆ ಮಾಸುವ ಮೊದಲೇ ಮತ್ತೊಂದು ಅವಘಡ ಸಂಭವಿಸಿದ್ದು ಬಿಜೆಪಿಯ ವೈಫಲ್ಯವನ್ನು ಕಾಂಗ್ರೇಸ್ ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಬಿಜೆಪಿಯ ಮುಖಂಡರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೇಳಿಕೆಗಳನ್ನು ನೀಡುತ್ತಾರೆ ಆದರೆ ಸಂಸತ್ ಭವನದಲ್ಲಿ ವಿದ್ವಂಸಕಾರಿ ಕೃತ್ಯ ನಡೆದು ೨೪ ಗಂಟೆ ಕಳೆದರೂ ಸಂಸದೇ ಶೋಭಾಕರಂದ್ಲಾಜೆ ಮೌನವಹಿಸಿರುವುದು ಸರಿಯಲ್ಲ ಎಂದರು.
ಮಾಜಿ ಅಧ್ಯಕ್ಷ ಡಿ.ಎಲ್.ವಿಜಯ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಮುಖಂಡರುಗಳಾದ ಎಂ.ಎಲ್.ಮೂರ್ತಿ, ಎಂಸಿ ಶಿವಾನಂದಸ್ವಾಮಿ, ಹಿರೇಮಗಳೂರು ರಾಮಚಂದ್ರ, ಹನೀಫ್, ಜೇಮ್ಸ್ ಡಿಸೋಜಾ, ಗಂಗಾಧರ್, ಅನ್ಸರ್, ಪ್ರಕಾಶ್ ರೈ, ಕೆ.ಭರತ್, ಸಿದ್ದೇಶ್ವರ ಇದ್ದರು.
A protest against the central government’s security failure