ಎಲ್ಲ ಜನತೆಯನ್ನು ಒಂದುಗೂಡಿಸುವ ಶಕ್ತಿ ಕ್ರೀಡೆಗಲ್ಲದೆ ಬೇರಾವ ಆಯಾಮಕ್ಕೂ ಇಲ್ಲ
ಚಿಕ್ಕಮಗಳೂರು: ಎಲ್ಲ ಜನತೆಯನ್ನು ಒಂದುಗೂಡಿಸುವ ಶಕ್ತಿ ಕ್ರೀಡೆಗಲ್ಲದೆ ಬೇರಾವ ಆಯಾಮಕ್ಕೂ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
ಅವರು ಇಂದು ನಗರದ ಸುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ-೨೦೨೩ನ್ನು ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಇಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇಂದಿನ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಪ್ರತಿಭೆ ಹೊರಬರಲಿ ಎಂದು ಆಶಿಸುತ್ತೇನೆ. ಇಷ್ಟು ಒಳ್ಳೆಯ ಪ್ರತಿಕ್ರಿಯೆಯನ್ನು ನಾವೂ ನಿರೀಕ್ಷೆ ಮಾಡಿರಲಿಲ್ಲ. ಅಧಿಕಾರಿ, ನೌಕರರು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದರು.
ನಮ್ಮ ಕಾರ್ಯವೈಖರಿ, ಒತ್ತಡಗಳನ್ನು ಬದಿಗಿಟ್ಟು ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕ್ರೀಡಾಸ್ಪೂರ್ತಿ ತೋರಬೇಕು. ವೈಷಮ್ಯ, ಮನಸ್ತಾಪಗಳಿಗೆ ಅವಕಾಶ ಬೇಡ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ವೇಳೆ ನಡೆದ ವಿವಿಧ ತಾಲ್ಲೂಕುಗಳ ಪಂಚಾಯತ್ ರಾಜ್ ಇಲಾಖೆ ಕ್ರೀಡಪಟುಗಳ ಪಥ ಸಂಚಲನದಲ್ಲಿ ಎನ್.ಆರ್ ಪುರ ತಂಡ ಪ್ರಥಮ ಸ್ಥಾನ ಗಳಿಸಿತು. ಶಾಲಾ ಮಕ್ಕಳ ಬ್ಯಾಂಡ್ ಗಮನ ಸೆಳೆಯಿತು.
ಪುರುಷರ ವಿಭಾಗದಲ್ಲಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಕೇರಮ್, ಷಟಲ್ ಬ್ಯಾಡ್ಮಿಂಟನ್, ಗುಂಡು ಎಸೆತ, ಚೆಸ್ ಪಂದ್ಯಾವಳಿಗಳು ನಡೆದವು.
ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಕೇರಮ್, ಗುಂಡು ಎಸೆತ ಹಾಗೂ ಚೆಸ್ ಪಂದ್ಯಾವಳಿಗಳು ನಡೆದವು. ಆಯಾ ತಾಲ್ಲೂಕಿನ ತಂಡಗಳನ್ನು ಉಳಿದ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಸಮಾರಂಭವನ್ನು ಉದ್ಘಾಟಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಅತೀಕ್ ಪಾಷ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಎಸ್ಪಿ ಡಾ|| ವಿಕ್ರಮ್ ಅಮಟೆ, ಉಪ ವಿಭಾಗಾಧಿಕಾರಿ ಹೆಚ್.ಡಿ ರಾಜೇಶ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪಕಾರ್ಯದರ್ಶಿ(ಆಡಳಿತ) ಕರೇಗೌಡ್ರ, ಮುಖ್ಯ ಲೆಕ್ಕಾಧಿಕಾರಿ ಎಸ್.ಎಸ್.ಶಿವಕುಮಾರ್, ಯೋಜನಾ ನಿರ್ದೇಶಕಿ ಎಸ್.ನಯನ, ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Rural Development and Panchayat Raj Sports and Cultural Program-2023