ಸರ್ಕಾರಿ ಅಧಿಕಾರಿಗಳು- ನೌಕರರಲ್ಲಿ ಬಹಳಷ್ಟು ಮಂದಿ ಒಳ್ಳೆಯ ಪ್ರತಿಭೆಗಳಿವೆ
ಚಿಕ್ಕಮಗಳೂರು: ಸರ್ಕಾರಿ ಅಧಿಕಾರಿಗಳು, ನೌಕರರಲ್ಲಿ ಬಹಳಷ್ಟು ಮಂದಿ ಒಳ್ಳೆಯ ಪ್ರತಿಭೆಗಳಿವೆ ಅವರಿಗೆಲ್ಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಮುಕ್ತವಾದ ವೇದಿಕೆ ಕಲ್ಪಿಸಿದೆ ಎಂದಿ ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ಹೇಳಿದರು.
ಎರಡು ದಿನಗಳ ಕಾಲ ನಗರದ ಸುಭಾಶ್ಚಂದ್ರಬೊಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ನಗರದ ಕುವೆಂಪು ಕಲಾ ಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ಪೊಲೀಸ್ ಇಲಾಖೆ ತಂಡದಿಂದ ಕ್ರೀಡಾ ಕೂಟ ಆರಂಭವಾಯಿತು ನಂತರ ಕಂದಾಯ ಇಲಾಖೆ, ಆರ್ಡಿಪಿಆರ್ ಇಲಾಖೆಗಳು ಕ್ರೀಡಾ ಕೂಟ ನಡೆಸಿವೆ. ಇದು ವರ್ಣರಂಜಿತ, ಅತ್ಯುತ್ತಮ, ಸರ್ವೋತ್ತಮವಾಗಿತ್ತು ಎಂದು ಬಣ್ಣಿಸಿದರು.
ಇದು ಕೇವಲ ಕ್ರೀಡಾ ಕೂಟ ಸಂಘಟಿಸುವುದು, ಅಧಿಕಾರಿ ನೌಕರರಿಗೆ ರಿಲಾಕ್ಸ್ ನೀಡುವುದಷ್ಟೇ ಉದ್ದೇಶವಲ್ಲ. ಇದರಲ್ಲಿ ನಾವೂ ಅಷ್ಟೇ ಉತ್ಸಾಹದಿಂದ ಭಾಗವಹಿಸಿದ್ದೇವೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಕರ್ತವ್ಯಕ್ಕೆ ಸೇರಿದ ಮೇಲೆ ಸಾಕಷ್ಟು ಹವ್ಯಾಸಗಳು ಅಲ್ಲಲ್ಲೇ ನಿಂತು ಹೋಗುತ್ತವೆ. ೨೪ ಗಂಟೆ ೩೬೫ ದಿನವೂ ಕೆಲಸ ಮಾಡುತ್ತಲೇ ಇರುತ್ತೇವೆ. ಇನ್ನೊಂದು ಕ್ಷಣ, ನಾಳೆ ಏನು ಎಂದು ಹೇಳಲು ಬರುವುದಿಲ್ಲ ಇಂತಹ ಸಂದರ್ಭದಲ್ಲಿ ಆರ್ಡಿಪಿಆರ್ನವರು ಎಲ್ಲರೂ ಒಂದೇ ವೇದಿಕೆಯಲ್ಲಿ ಭಾಗವಹಿಸುವುದು ಒಳ್ಳೆಯ ಅವಕಾಶ ಎಂದರು.
ನಾವು ಜಿಲ್ಲಾಡಳಿತ, ಇತರೆ ಇಲಾಖೆಗಳ ಮುಖ್ಯಸ್ಥರಾಗಿದ್ದರೂ ಪ್ರಸಂಶೆ, ಹೊಗಳಿಕೆ, ತೆಗಳಿಕೆ ಎಲ್ಲವೂ ಎಲ್ಲರಿಗೂ ಸೇರಿದ್ದಾಗಿರುತ್ತದೆ. ಅಂತಿಮವಾಗಿ ನಾವೆಲ್ಲರೂ ಇರುವುದು ಸಾರ್ವಜನಿಕರ ಕೆಲಸಕ್ಕೆ. ಆ ಮನಸ್ಥಿತಿ ಹೊಂದಬೇಕು. ನಿವೃತ್ತಿ ನಂತರ ನಾವೆಲ್ಲ ಸಾಮಾನ್ಯ ನಾಗರೀಕರಾಗುತ್ತೇವೆ ಎಂದರು.
ಕ್ರಿಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಯಶಸ್ಸಾಗಿದೆ. ಇದಕ್ಕಾಗಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋಪಾಲಕೃಷ್ಣ ಅವರು ಅಭಿನಂದನಾರ್ಹರು. ಅವರಲ್ಲೂ ಉತ್ತಮ ಪ್ರತಿಭೆಗಳು ಇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋಪಾಲಕೃಷ್ಣ, ಉಪಕಾರ್ಯದರ್ಶಿಗಳಾದ ಅತೀಕ್ ಪಾಷ, ಕರಿಗೌಡ, ಮುಖ್ಯ ಲೆಕ್ಕಾಧಿಕಾರಿ ಎಸ್.ಎಚ್.ಶಿವಕುಮಾರ್, ಯೋಜನಾ ನಿರ್ದೇಶಕಿ ನಯನ, ಜಿ.ಪಂ. ಇಂಜಿನೀಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನ ಮೂರ್ತಿ, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ವಿಭಾಗದ ವಿನಾಯಕ್ ಜೆ.ಹುಲ್ಲೂರು ಇತರರು ಇದ್ದರು.
Prize distribution ceremony for the winners of the sports event