ದತ್ತಪೀಠದಲ್ಲಿ ಮಹಿಳೆಯರು ದತ್ತಪಾದುಕೆಗಳ ದರ್ಶನ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ದತ್ತಪೀಠದಲ್ಲಿ ನಡೆಯುವ ಅನಸೂಯ ಜಯಂತಿ ಅಂಗವಾಗಿ ಭಾನುವಾರ ಮಹಿಳೆಯರಿಂದ ನಗರದ ಸಂಕೀರ್ತನಾ ಯಾತ್ರೆ ನಡೆಯಿತು.
ದತ್ತಪೀಠದಲ್ಲಿ ಸರದಿ ಸಾಲಿನಲ್ಲಿ ನಿಂತು ಭಾನುವಾರ ಮಹಿಳೆಯರು ದತ್ತಪಾದುಕೆಗಳ ದರ್ಶನ ಪಡೆದರು. ಪೀಠದ ಹೊರ ವಲಯದಲ್ಲಿ ಗಣಪತಿ ಹೋಮ, ದತ್ತ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು.
ಕಳೆದ ವರ್ಷದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಸಂಖ್ಯೆ ಸುಮಾರು ೩ ಸಾವಿರ ದಾಟಿತ್ತು. ಆದರೆ, ಈ ಬಾರಿ ಈ ಸಂಖ್ಯೆ ಒಂದು ಸಾವಿರದ ಗಡಿಯೂ ದಾಟಲಿಲ್ಲ. ಆದರೆ, ಪೊಲೀಸರ ಸಂಖ್ಯೆ ದ್ವಿಗುಣವಾಗಿತ್ತು.
ಈ ಬಾರಿ ಸಂಕೀರ್ತನಾ ಯಾತ್ರೆ ಹಾಗೂ ಶೋಭಾಯಾತ್ರೆಯ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಾಗಾಗಿ ಸಂಕೀರ್ತನಾ ಯಾತ್ರೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸಂಕೀರ್ತನಾ ಯಾತ್ರೆಯ ಆರಂಭದಿಂದ ಅಂತ್ಯದವರೆಗೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು ಸಾಗಿದರು.
ದತ್ತಪೀಠಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಇಂದು ಶೋಭಾಯಾತ್ರೆ: ದತ್ತ ಜಯಂತಿ ಉತ್ಸವದ ಎರಡನೇ ದಿನವಾದ ಸೋಮವಾರದಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ.
ಮಧ್ಯಾಹ್ನ ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಹೊರಡಲಿರುವ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಲ್ಲಿ ತೆರಳಿ ಆಜಾದ್ ಪಾಕ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ.
ಶೋಭಾಯಾತ್ರೆಯ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರವನ್ನು ನಿಷೇಧ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ದತ್ತಪೀಠದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು, ದತ್ತಪೀಠ ಸಂಪೂರ್ಣವಾಗಿ ನಮ್ಮ ಸುಪರ್ದಿಗೆ ಬರಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಈಗ ಪೂಜೆಗೆ ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗಬೇಕೆಂಬ ಭಾವನೆ ಹಿಂದುಗಳಲ್ಲಿ ಇದೆ. ಅದು ನಮ್ಮ ಜತೆ ಮತ್ತೆ ಕಾನೂನಾತ್ಮಕವಾಗಿ ಬರಲಿದೆ ಎಂದರು.
ದೇಶದ ಬೇರೆ ಬೇರೆ ಭಾಗದಲ್ಲಿರುವ ದತ್ತಭಕ್ತರು, ಇಲ್ಲಿಗೆ ಬಂದು ಹೋಗಬೇಕೆಂಬ ಅಪೇಕ್ಷೆ ನಮ್ಮದಾಗಿದೆ.ದತ್ತಪೀಠ ನಮ್ಮ ಸುಪರ್ದಿಗೆ ಬರಲಿದೆ ಎಂದು ಹೇಳಿದರು.
Women in Dattapeeth darshan of Dattapadukas