ಅನಸೂಯ ಜಯಂತಿ : ಮಹಿಳೆಯರಿಂದ ಸಂಕೀರ್ತನಾ ಯಾತ್ರೆ
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಭಾನುವಾರ ದತ್ತಪೀಠದಲ್ಲಿ ಮಹಿಳೆಯರಿಂದ ಅನಸೂಯ ಜಯಂತಿ ನಡೆಯಿತು,
ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಪಾಲಿಟೆಕ್ನಿಕ್ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆ ಜಿಲ್ಲಾದ್ಯಂತ ಆಗಮಿಸಿದ ಮಹಿಳೆಯರು ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಜಮಾಯಿಸಿದರು. ದತ್ತಾತ್ರೇಯ ಅಡ್ಡೆಗೆ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ಸಚಿವೆ ಶೋಭಾಕರಂದ್ಲಾಜೆ ಸಂಕೀರ್ತನಾಯಾತ್ರೆಗೆ ಚಾಲನೆ ನೀಡಿದರು.
ಬೊಳರಾಮೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಮೆರವಣಿಗೆ ಐ.ಜಿ.ರಸ್ತೆ ಮೂಲಕ ಮಲ್ಲಂದೂರು ವೃತ್ತವನ್ನು ಹಾದು ಪಾಲಿಟೆಕ್ನಿಕ್ ವೃತ್ತದವರೆಗೂ ಸಾಗಿತು.ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಹಿಳೆಯರು ಕೊರಳಿಗೆ ಕೇಶರಿ ಶಲ್ಯವನ್ನು ಹಾಕಿಕೊಂಡು ಭಾಗವಾಧ್ವಜ ಹಿಡಿದು, ಅನಸೂಯದೇವಿ ಚಿತ್ರಪಟದೊಂದಿಗೆ ದತ್ತಾತ್ರೇಯರ ನಾಮಸ್ಮರಣೆಮಾಡುತ್ತಾ ಮೆರವಣಿಯಲ್ಲಿ ತೆರಳಿದರು.
ಕೆಲವರು ದತ್ತಾತ್ರೇಯ ಸ್ವಾಮಿಗೆ ಜೈಕಾರ ಹಾಕಿದರೆ, ಮತ್ತೆ ಕೆಲವರು ಭಜನೆಮಾಡುತ್ತಾ ಹೆಜ್ಜೆಹಾಕಿದರು. ಪುತ್ತೂರಿನಿಂದ ಆಗಮಿಸಿದ ತಂಡದವರು ಶ್ರೀರಾಮ ಮತ್ತು ದತ್ತಾತ್ರೇಯರ ಹಾಡಿಗೆ ನೃತ್ಯಮಾಡುತ್ತಾ ಸಾಗಿದರು. ಬಾಲಕನೋರ್ವ ಆಂಜನೇಯಸ್ವಾಮಿಯ ವೇಷಧರಿಸಿ ಸಾರ್ವಜನಿಕರ ಗಮನ ಸೆಳೆದ.
ಪಾಲಿಟೆಕ್ನಿಕ್ ವೃತ್ತಕ್ಕೆ ತೆರಳಿದ ಮಹಿಳೆಯರು ಅಲ್ಲಿಂದ ಕಾರ್ಯಕ್ರಮದ ಸಂಘಟಕರು ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು. ಅಲ್ಲಿ ಸರದಿಸಾಲಿನಲ್ಲಿ ನಿಂತು ಅನಸೂಯ ದೇವಿ ಗದ್ದುಗೆಗೆ ತೆರಳಿಪೂಜೆ ಸಲ್ಲಿಸಿದರು. ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದುಕೊಂಡರು.
ಅನಸೂಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮಾತೆಯರಿಗೆ ಹಸಿರು ಬಳೆ, ಅರಿಶಿಣ,ಕುಂಕುಮ ನೀಡಲಾಯಿತು. ಪ್ರಸಾದ ಸ್ವೀಕರಿಸುವ ಮೂಲಕ ದತ್ತಪೀಠದಿಂದ ನಗರಕ್ಕೆ ಆಗಮಿಸಿದರು. ದತ್ತಜಯಂತಿ ಅಂಗವಾಗಿ ನಡೆಯುವ ಅನುಸೂಯ ಜಯಂತಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಕೇಂದ್ರ ಸಚಿವೆ ಶೋಭಾಕರಂದ್ಲಾಜೆ,ಪ್ರಾಂತ ಅಧ್ಯಕ್ಷೆ ವಿಜಯಲಕ್ಷ್ಮೀದೇಶಮನೆ, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾಶೆಟ್ಟಿ,ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಜಸಂತ ಅನಿಲ್ಕುಮಾರ್,ಕವಿತಾಲಿಂಗರಾಜು, ಬಿಜೆಪಿ ಮಾಧ್ಯಮ ಪ್ರಮುಖ್ ಕವಿತಾಶೇಖರ್, ನಗರಸಭೆ ಸದಸ್ಯೆ ರೂಪಕುಮಾರ್, ಮಾಜಿ ಸಚಿವ ಸಿ.ಟಿ.ರವಿ ವಿಶ್ವಹಿಂದುಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ, ಕಾರ್ಯದರ್ಶಿ ನರಿಗುಡ್ಡನಹಳ್ಳಿಯ ರಂಗನಾಥ್, ಹಾಸನ ವಿಭಾಗದ ಅಧ್ಯಕ್ಷ ಆರ್.ಡಿ.ಮಹೇಂದ್ರ,ಬಜರಂಗದಳದ ಜಿಲ್ಲಾಧ್ಯಕ್ಷ ಶಿವಕುಮಾರ್, ಶಶಾಂಕ್ಹೆರೂರು, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ಕೋಟ್ಯಾನ್ ಇದ್ದರು.
Sankirtana Yatra by women