ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಶಿಕ್ಷಣ ಮುಖ್ಯ
ಚಿಕ್ಕಮಗಳೂರು: ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯಬೇಕಾದರೆ ಶಿಕ್ಷಣದ ಪಾತ್ರ ಅತಿ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅಭಿಪ್ರಾಯಿಸಿದರು.
ಅವರು ವಿಜಯಪುರ ಜೆವಿಎಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂದು ನಾನು ಇಲ್ಲಿ ಸನ್ಮಾನ ಸ್ವೀಕರಿಸಿದ್ದೇನೆಂದರೆ ಅದಕ್ಕೆ ನನ್ನ ತಾಯಿ ಹಾಗೂ ಶಿಕ್ಷಣ ನೀಡಿದ ಸಂಸ್ಥೆ ಕಾರಣ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಪ್ರತಿಯೊಂದು ತಾಯಿ, ತಂದೆ ಪರಿಶ್ರಮ ಶ್ಲಾಘನೀಯ. ತಮ್ಮ ಮಕ್ಕಳಿಗೆ ನೀತಿ ಹೇಳಿಕೆ, ಆರ್ಥಿಕ ಸಬಲತೆ ಬಗ್ಗೆ ಹೆಚ್ಚು ತಿಳಿಸಿಕೊಟ್ಟಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ದೇಶದಲ್ಲಿ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಕೇವಲ ಡಾಕ್ಟರ್, ಇಂಜಿನಿಯರ್ಗೆ ಸೀಮಿತವಾಗದೆ ಬುದ್ದಿವಂತನಾಗಿದ್ದರೆ ಮಾತ್ರ ಕಠಿಣ ಪರಿಶ್ರಮದ ಮೂಲಕ ಆ ವ್ಯಕ್ತಿ ಜೀವನದಲ್ಲಿ ಮುಂದೆ ಬರುತ್ತಾನೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ಆ ಒಂದು ರಂಗದಲ್ಲಿ ಉತ್ತಮವಾಗಿ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಇವತ್ತಿನ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆರ್ಥಿಕ ಪ್ರಗತಿ ಹೊಂದಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸೇವಾ ಮನೋಭಾವನೆಯಿಂದ ಜಿಲ್ಲಾ ಒಕ್ಕಲಿಗರ ಸಂಘದಿಂದ ಜೆವಿಎಸ್ ಶಾಲೆಯನ್ನು ಸ್ಥಾಪಿಸಿ ಇಂದಿಗೆ ೩೨ ವರ್ಷಗಳಾಗಿವೆ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜೆವಿಎಸ್ ಶಾಲೆಗೆ ೧೩ ಸ್ಮಾರ್ಟ್ಬೋರ್ಡ್ಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಶಾಲೆಗೆ ೨ ಹೊಸಾ ಬಸ್ ನೀಡಿದ್ದೇವೆ ಈಗಾಗಲೇ ಡ್ರಾಮ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಮುಂದೆ ಸಂಗೀತ ಮತ್ತು ಡ್ಯಾನ್ಸ್ ಶಿಕ್ಷಕರನ್ನು ನೇಮಕ ಮಾಡಲು ಗುರಿ ಹೊಂದಲಾಗಿದೆ ಎಂದರು.
ಈ ರೀತಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪೋಷಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಕನಸು ಕಾಣುತ್ತಿರುವುದನ್ನು ನನಸು ಮಾಡಲು ಬದ್ಧರಾಗಿದ್ದೇವೆಂದು ಭರವಸೆ ನೀಡಿದರು.
ತಾಯಂದಿರು ತಮ್ಮ ಮನೆಯಲ್ಲಿ ಶಾಲೆಯಿಂದ ಬಂದ ಮಗು ಮೊಬೈಲ್, ಟಿವಿ ವೀಕ್ಷಣೆಗೆ ಅವಕಾಶ ಮಾಡಿಕೊಡದೆ ಧಾರಾವಾಹಿಗಳನ್ನು ನೋಡದಂತೆ ನಿಯಂತ್ರಿಸಿದಾಗ ಮಾತ್ರ ಮಕ್ಕಳು ಉತ್ತಮ ಅಂಕ ಪಡೆದು ಉದ್ಯೋಗಕ್ಕೆ ಸೇರಲು ಸಹಕಾರಿಯಾಗಲಿದ ಎಂದು ಕವಿಮಾತು ಹೇಳಿದರು.
ಇಂದು ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಧರ್ಮ, ಸಂಸ್ಕೃತಿ, ಧಾರ್ಮಿಕತೆ ಮೆರಯಾಗುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು ಅವಿಭಕ್ತ ಕುಟುಂಬಗಳಲ್ಲಿ, ದೇಶದ ಸಂಸ್ಕೃತಿ ಉಳಿಸುವ ಪ್ರಯತ್ನ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಸಹಕಾರ್ಯದರ್ಶಿ ಕೆ.ಕೆ.ಮನುಕುಮಾರ್, ಮಾಜಿ ಕಾರ್ಯದರ್ಶಿ ಉಮೇಶ್ ಚಂದ್ರ, ನಿರ್ದೇಶಕರಾದ ಕೆ.ಎಸ್.ನಾರಾಯಣಗೌಡ, ಡಿ.ಎಲ್ ವಸಂತಕುಮಾರಿ, ಆರತಿಓಂಕಾರೇಗೌಡ, ಕಳವಾಸೆ ರವಿ, ದಿನೇಶ್, ಸಲಹಾ ಸಮಿತಿ ಸದಸ್ಯರಾದ ಎಸ್.ಎಸ್.ವೆಂಕಟೇಶ್, ಎಂ.ಪಿ.ಗಂಗೇಗೌಡ, ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್, ಪಿ.ಯು ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್, ಸಿ.ಇ.ಓ ಕುಳ್ಳೇಗೌಡ, ವ್ಯವಸ್ಥಾಪಕರಾದ ರಾಜು ಉಪಸ್ಥಿತರಿದ್ದರು,
Vijayapura JVS School Anniversary Ceremony