ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ
ಚಿಕ್ಕಮಗಳೂರು: ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಗುರುವಾರ ನಗರ ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಧರಣಿ ನಡೆಸಿದರು.
ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ೩೧ ವರ್ಷಗಳ ಬಳಿಕೆ ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸಕಾರದ ಕ್ರಮವನ್ನು ಖಂಡಿಸಿ ಠಾಣೆ ಎದುರು ದಿಢೀರ್ ಪ್ರತಿಭಟಿಸಿದ ರವಿ, ಅಲ್ಲಿಯೇ ಕುಳಿತು ಶ್ರೀರಾಮ ನಾಪ ಜಪಿಸಿದ್ದಲ್ಲದೆ, ಭಜನೆಯನ್ನೂ ಮಾಡಿದರು.
ಕೆಲವೇ ನಿಮಿಷದಲ್ಲಿ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಠಾಣೆ ಬಳಿ ಜಮಾಯಿಸಿ ಗೇಟ್ ಬಳಿ ಮಳೆಯಲ್ಲೇ ಪ್ರತಿಭಟನೆ ನಡೆಸಿದರು. ನಾವೂ ರಾಮ ಭಕ್ತರು, ನಾವೂ ಕರಸೇವಕರೇ ನಮ್ಮನ್ನೂ ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ರೀರಾಮನ ವಿರೋಧಿಗಳು, ಹಿಂದೂಗಳ ವಿರೋಧಿಗಳು ಎಂದು ಆರೋಪಿಸಿದರು.
ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಸಿ.ಟಿ.ರವಿ ಅವರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಅರ್ಧಗಂಟೆ ಬಳಿಕ ರವಿ ಅವರನ್ನು ಪೊಲೀಸರು ಠಾಣೆಯ ಒಳಕ್ಕೆ ಕರೆದೊಯ್ಯರು.
ಇದರೊಂದ ರೊಚ್ಚಿಗೆದ್ದ ಕಾರ್ಯಕರ್ತರು ಏರುಧ್ವನಿಯಲ್ಲಿ ಘೋಷಣೆ ಹಾಕುತ್ತಾ ಗೇಟ್ ಬಳಿಯಿಂದ ಆಗಮಿಸಿ ಠಾಣೆಗೆ ನುಗ್ಗಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದರು.
ಕಾರ್ಯಕರ್ತರೆಲ್ಲರೂ ಸ್ಥಳದಲ್ಲೇ ಕುಳಿತು ಘೋಷಣೆಗಳನ್ನು ಮುಂದುವರಿಸಿದರು. ಸಿ.ಟಿ.ರವಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ಉಂಟಾಯಿತು.
ಅಂತಿಮವಾಗಿ ಪೊಲೀಸರು ಸಿ.ಟಿ.ರವಿ ಅವರನ್ನು ಠಾಣೆಯಿಂದ ಹೊರಕ್ಕೆ ಕರೆತಂದರು. ನಂತರ ಠಾಣೆ ಮುಂದೆ ಜಮಾಯಿಸಿದ್ದ ಕಾರ್ಯಕರ್ತರನ್ನು ಅಲ್ಲಿಂದ ಚದುರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್.ಪ್ರೇಂ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ, ಬೆಳವಾಡಿ ರವೀಂದ್ರ, ಮುಖಂಡರುಗಳಾದ ಟಿ.ರಾಜಶೇಖರ್, ಪುಷ್ಪರಾಜ್, ರೇವನಾಥ್, ಶಶಿ ಆಲ್ದೂರು, ಅಂಕಿತಾ, ಹಿರೇಮಗಳೂರು ಪುಟ್ಟಸ್ವಾಮಿ, ಕೇಶವ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Sudden protest in front of former minister CT Ravi station