ಮೂಡಿಗೆರೆಯ ಯುವ ಗಾಯಕ ಬಕ್ಕಿ ಮಂಜುನಾಥ್ ಗೆ ಬಿ.ಎಸ್.ಪಿ ಕಚೇರಿಯಲ್ಲಿ ಸನ್ಮಾನ
ಚಿಕ್ಕಮಗಳೂರು: ಹನ್ನೊಂದು ಗಂಟೆ ಹದಿನೈದು ನಿಮಿಷದ ಅವಧಿಯಲ್ಲಿ ಬರೋಬ್ಬರಿ ೧೦೫ ಹಾಡುಗಳನ್ನು ಹಾಡುವ ಮೂಲಕ ದಾಖಲೆ ನಿರ್ಮಿಸಿರುವ ಮೂಡಿಗೆರೆಯ ಯುವ ಗಾಯಕ ಬಕ್ಕಿ ಮಂಜುನಾಥ್ ಅವರನ್ನು ಜಿಲ್ಲಾ ಸಹೋದರತ್ವ ಸಮಿತಿ ಮತ್ತು ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಅಭಿನಂದಿಸಿದರು
ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಸಹೋದರತ್ವ ಸಮಿತಿಯ ಮಾಸಿಕ ಸಭೆಯಲ್ಲಿ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಸಹೋದರತ್ವ ಸಮಿತಿಯ ಜಿಲ್ಲಾಧ್ಯಕ್ಷೆ ಕೆ ಬಿ ಸುಧಾ ಮಾತನಾಡಿ ಆತ್ಮವಿಶ್ವಾಸ ಮತ್ತು ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಕ್ಕಿ ಮಂಜುನಾಥ್ ಉದಾಹರಣೆಯಾಗಿದ್ದಾರೆ ಎಂದರು
ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಮಾತನಾಡಿ ಬಕ್ಕಿ ಮಂಜುನಾಥ್ ಅವರನ್ನು ಸನ್ಮಾನಿಸುತ್ತಿರುವುದು ತಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಾಯಕ ಬಕ್ಕಿ ಮಂಜುನಾಥ್ ತಮ್ಮ ಸಾಧನೆಯ ಹಾದಿಯನ್ನು ವಿವರಿಸಿ ಪ್ರತಿಯೊಬ್ಬರಲ್ಲೂ ಯಾವುದೋ ಒಂದು ಶಕ್ತಿ ಇರುತ್ತದೆ ಅದನ್ನು ಅಷ್ಟಕ್ಕೇ ಸೀಮಿತಗೊಳಿಸದೇ ಇನ್ನಷ್ಟು ಹೆಚ್ಚಿಸಲು ದೊಡ್ಡ ಸಾಧನೆ ಮಾಡಲು ಉಪಯೋಗಿಸಬೇಕು ಎಂದು ಕಿವಿಮಾತು ಹೇಳಿದರು
ಬಿಎಸ್ ಪಿ ಮುಖಂಡರಾದ ಕೆ ಆರ್ ಗಂಗಾಧರ್ ಡಿ ಎಚ್ ವಿಜಯಕುಮಾರ್ ಎನ್ಎಸ್ ಮಂಜುನಾಥ್ ಜಿಲ್ಲಾ ಸಹೋದರತ್ವ ಸಮಿತಿಯ ಕಾರ್ಯದರ್ಶಿ ಕೆಎಸ್ ಮಂಜುಳಾ ಕಲಾವತಿ ರತ್ನ ಸಿದ್ದಯ್ಯ ನವೀನ್ ಉಪಸ್ಥಿತರಿದ್ದರು
Bakki Manjunath a young singer from Mudigere was honored at the BSP office