September 19, 2024

ಜ.25 ಕಳಸದಲ್ಲಿ ನೂತನ ಕಾಫಿ ಸಂಸ್ಕರಣಾ ಘಟಕ ಉದ್ಘಾಟನೆ

0
ಕಳಸ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಸುದ್ದಿಗೋಷ್ಠಿ

ಕಳಸ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕಳಸ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನ ಕಾಫಿ ಸಂಸ್ಕರಣಾ ಘಟಕ ಹಾಗೂ ಗೋದಾಮು ಕಟ್ಟಡಗಳ ಉದ್ಘಾಟನಾ ಸಮಾರಂಭ ಜ.೨೫ ರಂದು ಗುರುವಾರ ಬೆಳಗ್ಗೆ ೧೧ ಗಂಟೆಗೆ ಕಚಗಾನೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ತಿಳಿಸಿದರು.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದಿಂದ ಈ ಹಿಂದೆಯೇ ಮೆಲೆನಾಡಿನ ರೈತರಿಗೆ ಅನುಕೂಲವಾಗುವಂತೆ ಅಡಕೆ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಲಾಗಿತ್ತು. ಈಗ ಅದರ ಜತೆಗೆ ಕಾಫಿ ಸಂಸ್ಕರಣಾ ಘಟಕ ಹಾಗೂ ಬೃಹತ್ ಗೋದಾಮು ಕಟ್ಟಡಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಮಲೆನಾಡಿನ ಸಣ್ಣ ರೈತರು ಕೂಲಿ ಕಾರ್ಮಿಕರು ಸೇರಿದಂತೆ ಜಾಗದ ಸಮಸ್ಯೆಯಿಂದ ಅಡಕೆ ಹಾಗೂ ಕಾಫಿಯನ್ನು ಸಂಸ್ಕರಣೆ ಮಾಡುವುದು ಕಷ್ಟವಾಗಿದೆ. ಇದನ್ನು ಮನಗಂಡು ಸಂಘದ ವತಿಯಿಂದ ಈ ರೀತಿಯ ಸಂಸ್ಕರಣಾ ಘಟಕಗಳನ್ನು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ ಎಂದರು.

ಸಂಘ ಸ್ಥಾಪನೆಯಾದಾಗಿನಿಂದ ಹಂತಹಂತವಾಗಿ ಬೆಳವಣಿಗೆ ಕಾಣುತ್ತಿದ್ದು, ಈ ಭಾಗದ ರೈತರಿಗೆ ಅನುಕೂಲಕರವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ೨೦೨೨-೨೩ರಲ್ಲಿ ಸಂಘದ ವ್ಯವಹಾರ ೪೬೦ ಕೋಟಿಗಳಾಗಿದ್ದು, ಮುಂದಿನ ವರ್ಷಗಳಲ್ಲಿ ೫೫೦ ಕೋಟಿ ದಾಟುವ ಗುರಿ ಹೊಂದಿದೆ. ಈ ಕಾರಣಕ್ಕೆ ೮ ಬಾರಿ ರಾಜ್ಯಮಟ್ಟದ ಅತ್ಯುತ್ತಮ ಸಹಕಾರ ಸಂಘ, ೨೩ ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ, ೧೬ ಬಾರಿ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಸಂಘಕ್ಕೆ ಲಭಿಸಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಜಿಲ್ಲಾ ಉಸುವಾರಿ ಸಚಿವ ಕೆ.ಜೆ.ಜಾರ್ಜ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ಎಸ್.ಎಲ್.ಬೋಜೆಗೌಡ, ಬೆಳ್ಳಿಪ್ರಕಾಶ್, ಡಿ.ಎಸ್.ಸುರೇಶ್, ಬಿ.ಶಿವಣ್ಣ, ವಿ.ಕೆ. ಶಿವೇಗೌಡ, ಆಶಾಲತಾ ಡಿ ಜೈನ್ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.

ಪ್ರಸ್ತುತ ೩೫೭೦ ಸದಸ್ಯರನ್ನು ಹೊಂದಿರುವ ಸಂಘದಲ್ಲಿ ಸದಸ್ಯರಿಗೆ ಬೇಕಾದ ಅಗತ್ಯ ಸೇವೆಗಳನ್ನು ನೀಡಲಾಗುತ್ತಿದೆ. ರೈತರಿಗೆ ಅವಶ್ಯಕವಾಗಿರುವ ಗೊಬ್ಬರ, ಕಿಮಿನಾಷಕ, ಕೃಷಿ ಉಪಕರಣ, ಕೃಷಿ ಯಂತ್ರೋಪಕರಣ, ನಿಯಂತ್ರಿತ ಹಾಗೂ ಅನಿಯಂತ್ರಿತ ವಸ್ತುಗಳು, ಸಿಮೆಂಟ್, ಕೋಟೆಡ್ ಹಾಗೂ ಸಿಮೆಂಟ್ ಶೀಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಕೃಷಿ ಇಲಾಖೆಯ ಸಹಾಯಧನದೊಂದಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ರೈತರಿಗೆ ನೀಡಲಾಗಿತ್ತಿದೆ ಎಂದರು.

ಕಳೆದ ಸಾಲಿನಲ್ಲಿ ರೂ.೮೮೫ ಕೋಟಿ ವ್ಯಾಪಾರ ವಹಿವಾಟು ನಡೆಸಲಾಗಿದೆ. ಪ್ರತಿಷ್ಠಿತ ಗೊಬ್ಬರ ಕಂಪೆನಿಗಳಾದ ಇಪ್ಕೋ, ಐ.ಪಿ.ಎಲ್., ಕ್ರಿಬ್ಕೋ, ಎಂ.ಸಿ.ಎಫ್., ಕೋರಮಂಡಲ್, ಪ್ಯಾಕ್ಟಂಪಾಸ್ ಹಾಗೆಯೇ ಸಿಮೆಂಟ್ ಕಂಪೆನಿಗಳಾದ ಎ.ಸಿ.ಸಿ., ಅಲ್ಟ್ರಾಟೆಕ್, ಮೈಸೆಮ್ ಕಂಪೆನಿಗಳ ಡೀಲರ್ ಶಿಫ್ ಪಡೆದು ವ್ಯವಹಾರ ನಡೆಸಲಾಗುತ್ತಿದೆ. ಈಸಿ ಲೈಫ್ ಕಂಪೆನಿಗೆ ಸಂಘದ ಮಳಿಗೆಯನ್ನು ಬಾಡಿಗೆ ರೂಪದಲ್ಲಿ ನೀಡಿದ್ದು ಅವರು ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ದುರಸ್ತಿಯನ್ನು ಮಾಡುತ್ತಾರೆ ಎಂದು ತಿಳಿಸಿದರು.

ಸಂಘದ ಸದಸ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಿರುವ ಜೊತೆಗೆ ಸದಸ್ಯರಿಗೆ ಸೇಫ್ ಲಾಕರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಉಳಿತಾಯ ಖಾತೆ, ಖಾಯಂ ಠೇವಣಿ, ಪಿಗ್ಮಿ ಠೇವಣಿ, ಆರ್.ಡಿ. ಠೇವಣಿಗಳನ್ನು ಸಂಗ್ರಹಿಸುತ್ತಿದ್ದು ಒಟ್ಟು ರೂ.೫೦.೫೦ ಕೋಟಿ ಠೇವಣಿ ಹೊಂದಿರುತ್ತದೆ. ಸಂಘದಲ್ಲಿ ೯೫ ಸ್ವಸಹಾಯ ಸಂಘಗಳಿದ್ದು ಇವರ ಉಳಿತಾಯ ರೂ.೪೦.೨೨ ಲಕ್ಷ ಇರುತ್ತದೆ. ರೂ.೨೩.೩೦ ಕೋಟಿ ಮೊತ್ತವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕರ್ನಾಟಕ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಆಶಾಲತಾ ಡಿ ಜೈನ್, ನಿರ್ದೇಶಕರಾದ ಸತೀಶ್‌ಚಂದ್ರ, ಅನಿಲ್ ಗೇವಿನ್ ಡಿಸೊಜ ಇದ್ದರು

Kalasa Taluk Primary Agriculture Cooperative Society

About Author

Leave a Reply

Your email address will not be published. Required fields are marked *

You may have missed