ದೇವರ ಸ್ಮರಣೆಯಿಂದ ನಕಾರಾತ್ಮಕ ಅಂಶಗಳು ನಾಶ
ಚಿಕ್ಕಮಗಳೂರು: ದೇವಾಲಯಗಳ ಭೇಟಿ ಮತ್ತು ದೇವರ ಸ್ಮರಣೆಯಿಂದ ನಕಾರಾತ್ಮಕ ಅಂಶಗಳು ನಾಶವಾಗಿ ಸಕಾರಾತ್ಮಕ ಅಂಶಗಳು ಮೈಗೂಡುತ್ತವೆ ಎಂದು ಶಾಸಕ ಎಚ್. ಡಿ .ತಮ್ಮಯ್ಯ ತಿಳಿಸಿದ್ದಾರೆ.
ರಾಮೇಶ್ವರ ನಗರದ ಹಳ್ಳದ ರಾಮೇಶ್ವರ ದೇವಾಲಯದ ಸಮೀಪ ನಿರ್ಮಿಸಿರುವ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು ದೇವಸ್ಥಾನಗಳು ಶಾಂತಿ-ನೆಮ್ಮದಿ ತಾಣ ಎಂದರು.
ದೇವಾಲಯಗಳು ಸರ್ವ ಜನರನ್ನು ಒಗ್ಗೂಡಿಸುವ ಕೇಂದ್ರಗಳು. ಭಾವೈಕ್ಯ ಬೆಸೆಯುವ ತಾಣ. ಉತ್ತಮ ಆರೋಗ್ಯ, ಶಿಕ್ಷಣ ನಮ್ಮ ಪ್ರಮುಖ ಆಶಯವಾಗಿದ್ದು ಅದಕ್ಕೆ ಭಗವಂತನ ಕೃಪಾಶೀರ್ವಾದವು ಅಗತ್ಯ ಎಂದು ತಿಳಿಸಿದರು.
ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಮುಂದಿನ ಬಜೆಟ್ ಬಳಿಕ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಎರಡು ವರ್ಷದ ಅವಧಿ ಒಳಗೆ ಸಮುದಾಯ ಭವನ ಪೂರ್ಣಗೊಳಿಸಿದ ಹಳ್ಳದ ರಾಮೇಶ್ವರ ದೇವಾಲಯ ಸೇವಾ ಸಂಘದ ಕಾರ್ಯವನ್ನು ಅಭಿನಂದಿಸಿ ಭವನ ಒಳ್ಳೆಯ ಕೆಲಸಗಳಿಗೆ ಬಳಕೆ ಆಗಲಿ ಎಂದು ಆಶಿಸಿದರು.
ಮಾಜಿ ಸಚಿವ ಸಿ.ಟಿ .ರವಿ ಮಾತನಾಡಿ ಜಾತಿ ಮತ್ತು ಅಸ್ಪೃಶ್ಯತೆಗಳನ್ನು ಹೊಡೆದೋಡಿಸಿ ಸರ್ವರನ್ನು ಪ್ರೀತಿಸಿದಾಗ ಶ್ರೀ ರಾಮನ ಪ್ರಮುಖ ಆಶಯಗಳನ್ನು ನೆರವೇರಿಸಿದಂತೆ ಆಗುತ್ತದೆ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ ಪರಿಪೂರ್ಣ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯ ಒಂದು ಭಾಗವಾಗಿದ್ದು, ಆದರ್ಶ ಪುರುಷ ಶ್ರೀ ರಾಮ ಎಲ್ಲರ ಮನದಲ್ಲಿದ್ದು, ಆತನ ಕೆಲ ಗುಣಗಳನ್ನಾದರೂ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ಯಗಚಿ ಹಳ್ಳದ ಪ್ರಾಯೋಗಿಕ ಶುದ್ಧೀಕರಣಕ್ಕೆ ೩೦ ಲಕ್ಷ ರೂ.ಗಳನ್ನು ಇಟ್ಟಿದ್ದು, ಕೇಂದ್ರ ಸರ್ಕಾರಕ್ಕೂ ಸಮಗ್ರ ಪ್ರಸ್ತಾವನೆ ಸಲ್ಲಿಸಿದ್ದು ತಮ್ಮ ಇತಿ-ಮಿತಿಯಲ್ಲಿ ಅನುಷ್ಠಾನಕ್ಕೆ ಶ್ರಮಿಸುವ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ದೇವಾಲಯದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮುದಾಯ ಭವನದ ಅಭಿವೃದ್ಧಿಗೆ ನೆರವು ಕಲ್ಪಿಸುವ ಭರವಸೆ ನೀಡಿದರು.
ನಗರಸಭೆ ಸದಸ್ಯೆ ರೂಪ ಕುಮಾರ್ ಉಪಸ್ಥಿತರಿದ್ದರು. ರಾಮೇಶ್ವರ ನಗರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ರಘು ಗೌಡ, ನಿಕಟಪೂರ್ವ ಅಧ್ಯಕ್ಷ ಆನಂದ ರಾಜ ಅರಸ್, ವಿಗ್ರಹ ಶಿಲ್ಪಿ ಏಕಾಂತ ರಾಮು ಹಾಗೂ ಅತಿಥಿಗಳನ್ನು ಗೌರವಿಸಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತ ದಿನೇಶ್ ಪಟವರ್ಧನ್ ನಿರೂಪಿಸಿದರು.
ಎರಡು ದಿನಗಳ ಕಾಲ ಅರ್ಚಕರಾದ ಸೂರ್ಯನಾರಾಯಣ, ಸುನಿಲ್ ಕುಮಾರ್ ನೇತೃತ್ವದಲ್ಲಿ ವಾಸ್ತು ಹೋಮ, ಗಣಪತಿ ಹೋಮ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಾಮೇಶ್ವರ ನಗರ ಭಜನಾ ಮಂಡಳಿ ಸದಸ್ಯರು ಸಹಕರಿಸಿದರು.