ರತ್ನಗಿರಿ ಗಾರ್ಡನ್ (ರಿ) ಮಹಾತ್ಮಗಾಂಧಿ ಉದ್ಯಾನವನ ಟ್ರಸ್ಟ್ ಸಭೆ
ಚಿಕ್ಕಮಗಳೂರು: ನಗರದ ರತ್ನಗಿರಿ ಗಾರ್ಡನ್ ಮಹಾತ್ಮಗಾಂಧಿ ಉದ್ಯಾನವನ ಮತ್ತಷ್ಟು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ರತ್ನಗಿರಿ ಗಾರ್ಡನ್ (ರಿ) ಮಹಾತ್ಮಗಾಂಧಿ ಉದ್ಯಾನವನ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯಲು ಕ್ರಮಕೈಗೊಂಡರೆ ಹೆಚ್ಚು ಜನರು ಬರುವ ಜೊತೆಗೆ ಆರ್ಥಿಕವಾಗಿ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಚಿಂತಿಸಲಾಗಿದೆ. ಗಾರ್ಡನಲ್ಲಿ ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅಗತ್ಯವಾಗಿ ಬೇಕಾಗಿರುವ ಕೆಲವು ಕೆಲಸಗಳು ತುರ್ತಾಗಿ ಕ್ರಮಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದ ಅವರು. ರೈಲ್ವೆ ಇಂಜಿನ್ ದುರಸ್ತಿ ಮತ್ತಿತರ ದುರಸ್ತಿ ಕಾರ್ಯಗಳು ದರಪಟ್ಟಿ ಕರೆದು ದುರಸ್ತಿ ಪಡಿಸಿಕೊಳ್ಳಲು ಸೂಚಿಸಿದರು.
ಮಹಾತ್ಮಗಾಂಧಿ ಉದ್ಯಾನವನದಲ್ಲಿ ಗೃಹ ರಕ್ಷಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹಾಕಲು ಕ್ರಮಕೈಗೊಳ್ಳಲಾಗುವುದು ಉದ್ಯಾನವನಕ್ಕೆ ಲೈಟು, ಸೈನ್ ಬೋರ್ಡು ಹಾಕಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ನಾಗರೀಕ ವಿಶ್ರಾಂತಿ ತಾಣ, ಮಕ್ಕಳ ಆಟಿಕೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ತಿಳಿಸಿದರು. ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಗೌರವಧನ ಹೆಚ್ಚಿಸಲು ತಿಳಿಸಿದ ಅವರು ನಗರ ಸಭೆಯಿಂದ ಪ್ರತಿ ವರ್ಷ ರೂ. ೫.೦೦ ಲಕ್ಷಗಳು ೩ ವರ್ಷಗಳಿಂದ ಬಂದಿಲ್ಲದಿರುವುದರ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಟ್ರಸ್ಟ್ ಸದಸ್ಯರಾದ ಎಂ.ಎಲ್. ಮೂರ್ತಿ ಅವರು ಮಾತನಾಡಿ ಉದ್ಯಾನವನಕ್ಕೆ ಸರ್ಕಾರದಿಂದ ಪ್ರತಿವರ್ಷ ರೂ. ೨೫ ಲಕ್ಷಗಳು ಬರುವಂತೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಆದಾಯ ಹೆಚ್ಚು ಮಾಡಲು ಸಹಾಯಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭೆ ಆಯುಕ್ತರಾದ ಬಸವರಾಜ್, ಯೋಜನಾ ನಿರ್ದೇಶಕರಾದ ನಾಗರತ್ನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜನಾಯ್ಕ, ಟ್ರಸ್ಟ್ ಸದಸ್ಯರಾದ ಕೆ.ಟಿ. ರಾಧಕೃಷ್ಣ, ಶ್ರೀಮತಿ ಹಬೀಬಾ ಎನ್ ಪಾಷ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮೋಹನ್ ಅವರು ಉದ್ಯಾನವನದಲ್ಲಿ ಆಗಿರುವ ಹಾಗೂ ಮುಂದೆ ಅಭಿವೃದ್ಧಿ ಪಡಿಸಬೇಕಾದ ವಿಷಯಗಳನ್ನು ಸಭೆಗೆ ತಿಳಿಸಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.
Ratnagiri Garden (Re) Mahatma Gandhi Garden Trust Sabha