ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಕೈಬಿಡಿ
ಚಿಕ್ಕಮಗಳೂರು: ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಮಾಜಿ ಸಚಿವ ಸಿ.ಟಿ. ರವಿ ತರಾಟೆ ತೆಗೆದು ಕೊಂಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿ ಹಾಕುವ ನೀತಿಯನ್ನು ಕೈಬಿಡಿ, ವೈಫಲ್ಯ ಒಪ್ಪಿ, ಯಾವುದು ಸಾಧ್ಯವೋ ಆ ಯೋಜನೆ ಅನುಷ್ಠಾನ ಮಾಡಿ. ಬೇಕಾಬಿಟ್ಟಿ ಯೋಜನೆ ಜಾರಿಗೆ ತಂದು, ಇದೀಗ ಹಣಕಾಸಿನ ತೊಂದರೆಯಾಗಿದ್ದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಕೈಬಿಡಿ ಎಂದು ಗುಡುಗಿದರು.
ಬೆಂಗಳೂರಿನಲ್ಲಿಯೇ ಶೇ. 70ರಷ್ಟು ಆದಾಯ ಕ್ರೋಢಿಕರಣವಾಗುತ್ತಿದೆ. ಅಲ್ಲಿನವರೆಲ್ಲ ಸೇರಿ ನನ್ನ ತೆರಿಗೆ ನನ್ನ ಹಕ್ಕು ಅಂದ್ರೆ ಏನ್ ಮಾಡ್ತೀರಾ? ಅದನ್ನ ವರುಣಕ್ಕೆ, ಕಲ್ಬುರ್ಗಿಗೆ, ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಂಗಿಲ್ಲ ಅಂದ್ರೆ ಏನೂ ಮಣ್ಣು ತಿಂತಿರಾ? ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸಂಗ್ರಹವಾಗುವ ತೆರಿಗೆಯನ್ನ ವರುಣಕ್ಕೂ ತೆಗೆದುಕೊಂಡು ಹೋಗ್ತೀರಿ, ಬೇರೆ ಕಡೆಗೂ ತೆಗೆದುಕೊಂಡು ಹೋಗ್ತೀರಾ. ನಾಳೆ ಅವ್ರೆಲ್ಲ ವಿಧಾನಸೌಧದ ಮುಂದೆ ನನ್ನ ತೆರಿಗೆ ನನ್ನ ಹಕ್ಕು ಅಂತಾ ಪ್ರತಿಭಟನೆ ಮಾಡಿದ್ರೆ, ನೀವೇನು ಮಣ್ಣು ತಿಂತಿರಾ? ರಾಜ್ಯದ ಜನರಿಗೆ ಮಣ್ಣು ತಿನ್ನಿಸುತ್ತೀರಾ ಎಂದು ಪ್ರಶ್ನಿಸಿದರು.