ಫೆ.16ಕ್ಕೆ ನಗರದಲ್ಲಿ ರೋಟರಿ ಕ್ಲಬ್ ಜಿಲ್ಲಾ ಸಮ್ಮೇಳನ
ಚಿಕ್ಕಮಗಳೂರು: ಈ ಬಾರಿಯ ರೋಟರಿ ಕ್ಲಬ್ ಜಿಲ್ಲಾ (೩೧೮೨) ಸಮ್ಮೇಳನ ಫೆ. ೧೬ ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ನಗರದಲ್ಲಿ ನಡೆಯಲಿದೆ ಎಂದು ೩೧೮೨ ರೋಟರಿ ಜಿಲ್ಲಾ ರಾಜ್ಯಪಾಲ ಬಿ.ಸಿ. ಗೀತಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಚಿಕ್ಕಮಗಳೂರು, ಉಡುಪಿ, ಹಾಸನ ಹಾಗೂ ಶಿವಮೊಗ್ಗ ಕಂದಾಯ ಜಿಲ್ಲೆಗಳ ೩೫೦೦ ರೋಟರಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರೋಟರಿ ಕ್ಲಬ್ ನ ಇತಿಹಾಸದಲ್ಲಿ ಇದುವರೆಗೆ ಚಿಕ್ಕಮಗಳೂರಿನಲ್ಲಿ ಯಾವುದೇ ರೋಟರಿ ಸಮ್ಮೇಳನ ನಡೆದಿರಲಿಲ್ಲ. ಈ ಬಾರಿ ಬಾಳೆಹೊನ್ನೂರು ರೋಟರಿ ಕ್ಲಬ್ ಘಟಕದ ಅತಿಥ್ಯದಲ್ಲಿ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಫೆ. ೧೬ರಂದು ಸಂಜೆ ೫ ಗಂಟೆಗೆ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣಾನಾಥ ಸ್ವಾಮೀಜಿಯವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ, ರೋಟರಿ ಅಂತರಾಷ್ಟ್ರೀಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ, ಸಂತೋಷ್ ಪ್ರಧಾನ್, ಅಭಿನಂದನ್ ಶೆಟ್ಟಿ ಹಾಗೂ ಡಿ. ಎಸ್. ರವಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಫೆ. ೧೭ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಬಿ.ಆರ್. ರವಿಕಾಂತೇಗೌಡ, ಕರ್ನಾಟಕ ಲಿಗಲ್ ಕೌನ್ಸಿಲ್ನ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್, ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸೌಮ್ಯ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಫೆ. ೧೮ ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಹಾಗೂ ನಟ ಪ್ರಕಾಶ್ ಬೆಳವಾಡಿ, ಕಲಾವಿದ ಗಣೇಶ್ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ. ಸಿ.ಎನ್. ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಎ.ಎಂ. ನಂಜುಂಡಸ್ವಾಮಿ, ಕಾರ್ಯದರ್ಶಿ ಅನಂತೇಗೌಡ, ಬಿ.ಕೆ. ಗುರುಮೂರ್ತಿ, ಶ್ರೀವತ್ಸ, ತನೋಜ್ ನಾಯ್ಡು, ನಾಗೇಶ್, ರುದ್ರೇಶ್ ಕಡೂರು ಉಪಸ್ಥಿತರಿದ್ದರು.
District conference of Rotary Club in the city on February 16