ನಟ ಪುನೀತ್ ರಾಜ್ಕುಮಾರ್ ಸರಳ ಸಜ್ಜನ ಸ್ವಭಾವದ ವ್ಯಕ್ತಿ
ಚಿಕ್ಕಮಗಳೂರು: ದೇವರಲ್ಲಿ ಭಯ, ಭಕ್ತಿ ಇರುವುದರಿಂದ ಸಮಾಜದಲ್ಲಿ ಎಲ್ಲಾ ಸಮುದಾಯದ ಜನ ಅವರ ನಂಬಿಕೆಯಂತೆ ವಿವಿಧ ಬಗೆಯಲ್ಲಿ ದೇವರ ಪೂಜೆ ಮಾಡುತ್ತಿರುವುದು “ದೇವನೊಬ್ಬ ನಾಮ ಹಲವು” ಎಂಬುವುದಕ್ಕೆ ಪೂರಕ-ಪ್ರೇರಕ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.
ಅವರು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ ದೇವರಲ್ಲಿ ನಂಬಿಕೆ ಇಟ್ಟು ಪೂಜಿಸಿ, ಪ್ರಾರ್ಥಿಸಿದರೆ ಸಕಲವು ಸಿದ್ಧಿಸುತ್ತದೆ ಎಂದ ಅವರು ಜಿಲ್ಲೆಯಲ್ಲಿ ಪಕ್ಷದ ಐದು ಶಾಸಕರು ಇರುವುದರಿಂದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದ್ದಾರೆ, ಜಿಲ್ಲೆಯಲ್ಲಿ ೧.೬೨ ಕೋಟಿ ಜನರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿ ಅನುಷ್ಠಾನ ಮಾಡಿರುವುದರಿಂದ ಕರ್ನಾಟಕ ರಾಜ್ಯ ದೇಶದಲ್ಲೇ ಮಾದರಿಯಾಗಿ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.
ನಟ ಪುನೀತ್ ರಾಜ್ಕುಮಾರ್ ರವರು ಸರಳ, ಸಜ್ಜನಿಕೆ ಸ್ವಭಾವದ ವ್ಯಕ್ತಿಯಾಗಿದ್ದು, ಅತ್ಯಂತ ವಿನಯದಿಂದ ಎಲ್ಲರೊಂದಿಗೆ ಸಂಯಮದಿಂದ ಮಾತನಾಡುವ ಸೌಜನ್ಯ ಮೈಗೂಡಿಸಿಕೊಂಡಿದ್ದರು ಜೊತೆಗೆ ನನ್ನ ಪುತ್ರನೊಂದಿಗೆ ಆಪ್ತ ಸ್ನೇಹಿತನಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ಹೋರಾಟ ಮಾಡಬೇಕಾದ ದುರದೃಷ್ಟಕರ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಕುಟುಂಬದವರು ಪುನೀತ್ ರಾಜ್ಕುಮಾರ್ ಪುತ್ಥಳಿ ನಿರ್ಮಾಣ ಹಾಗೂ ಪುರಾತನ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿರುವುದನ್ನು ಅಭಿನಂದಿಸಿದರು.
ಇಂದು ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು, ವಿದ್ಯುತ್ ಸಮಸ್ಯೆ ಎದುರಾಗಿದೆ. ಆದರೂ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ರೈತರ ಪಂಪ್ಸೆಟ್ಗಳಿಗೆ ೭ ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ ಎಂದರು.
ಪ್ರಾಸ್ತಾವಿಕವಾಗಿ ವಾಸುಪೂಜಾರಿ ಮಾತನಾಡಿದರು. ಅಧ್ಯಕ್ಷತೆಯನ್ನು ಕೆ.ವಿ ರವಿಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಶಿರವಾಸೆ ಗ್ರಾ. ಪಂ ಅಧ್ಯಕ್ಷ ರಘುನಾಥ್, ಕೆ.ಆರ್ ಚಂದ್ರೇಗೌಡ, ಬಿಸಿಲೇಹಳ್ಳಿ ಸೋಮಶೇಖರ್, ಪಿ.ವಿ ಲೋಕೇಶ್, ರೇಣುಕಾರಾಧ್ಯ, ಪ್ರಕಾಶ್, ಕೆ.ಆರ್ ಅನಿಲ್ ಕುಮಾರ್, ಜಾರ್ಜ್ ಆಸ್ಟಿನ್, ಜೆ.ಸಿ ಲಕ್ಷ್ಮಣ, ಗಾಳಿಗುಡ್ಡೆ ಯೋಗೀಶ್, ನಂಜೇಶ್, ಪ್ರೇಮ, ಜೆಸೆಂತ, ಲೋಕೇಶ್ ಮತ್ತಿತರರಿದ್ದರು.
Dr. Dedication of Puneeth Rajkumar Putthali