ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯ ಕೆರೆ ತುಂಬಿಸಲು ಬದ್ಧ
ಚಿಕ್ಕಮಗಳೂರು: ಸಖರಾಯಪಟ್ಟಣದಿಂದ ಬಾಣಾವರದ ವರೆಗೆ ಸುಮಾರು ೨೦ ಕೋಟಿ ರೂ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ಸಖರಾಯಪಟ್ಟಣ ಹೋಬಳಿಯ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೮೫ ಲಕ್ಷ ರೂ ವೆಚ್ಚದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸುಮಾರು ೫೯ ಸಾವಿರ ಕೋಟಿ ರೂ ೫ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ವಿನಿಯೋಗ ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂಬ ವಿಪಕ್ಷಗಳ ಆರೋಪಗಳಿಗೆ ಉತ್ತರವಾಗಿ ಸರ್ಕಾರ ಹಲವಾರು ಯೋಜನೆಯಡಿ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಅಭಿವೃದ್ಧಿಯ ವೇಗ ಕಡಿಮೆ ಆಗಿದೆಯೇ ಹೊರತು ಹಣವಿಲ್ಲ ಎಂಬ ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯಸರ್ಕಾರ ಸಣ್ಣ ನೀರಾವರಿ ಇಲಾಖೆಗೆ ೭.೩೦ ಕೋಟಿ ರೂ ಅನುದಾನ ಮಂಜೂರು ಮಾಡಿದೆ ಎಂದ ಅವರು ಕಾರ್ಯಾದೇಶ ನೀಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಈ ಭಾಗದ ದೊಡ್ಡ ಯೋಜನೆಗಳಾದ ಭದ್ರಾ ಉಪಕಣಿವೆಯಿಂದ ನೀರು ತುಂಬಿಸುವ ಕಾಮಗಾರಿ ಭರದಿಂದ ನಡೆಯುತ್ತಿದ್ದು, ೨ನೇ ಹಂತದ ಕಾಮಗಾರಿಗೆ ಸಧ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.
ಸಿಕ್ಕಿರುವ ತಮ್ಮ ಅಧಿಕಾರವಧಿಯಲ್ಲಿ ಸಂಪೂರ್ಣ ಜನಸೇವೆಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದ ಅವರು ಈ ಭಾಗಕ್ಕೆ ಕೆರೆ ತುಂಬಿಸುವ ಯೋಜನೆ ಜೊತೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಈ ಭಾಗದ ರೈತರು ಅತೀ ಹೆಚ್ಚು ಮಳೆಯಾಶ್ರಿತ ಭೂಮಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆ ತುಂಬಿಸುವ ಕೆಲಸವನ್ನು ಸರ್ಕಾರ ಗಮನ ಸೆಳೆದು ಬದ್ಧವಾಗಿರುವುದಾಗಿ ತಿಳಿಸಿದ ಅವರು ಈ ಬಗ್ಗೆ ರೈತರು ಆತಂಕಕ್ಕೊಳಗಾಗಬಾರದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಎಂ.ಪಿ ಉಮೇಶ್, ಸದಸ್ಯರಾದ ರೂಪಾಆನಂದ್, ಎ.ಸಿ ಚಂದ್ರಪ್ಪ, ಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ನಂಜುಂಡಪ್ಪ, ಗ್ರಾಮಸ್ಥರಾದ ಸುರೇಶ್, ಕುಮಾರ್, ಸತೀಶ್, ಶ್ರೀಧರ್, ನಾಗಣ್ಣ, ಅಣ್ಣಪ್ಪ, ಪ್ರಕಾಶ್, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಮಾಜಿ ಜಿ.ಪಂ ಸದಸ್ಯೆ ಹೇಮಾವತಿ ಸ್ವಾಗತಿಸಿದರು
Committed to fill the lake of Nidaghatta Village