Distribution of Sports Goods: ನೂರಕ್ಕೆ ನೂರರಷ್ಟು ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಾಗುತ್ತದೆ- ಎಂ.ಎನ್.ನಟರಾಜ್
ಚಿಕ್ಕಮಗಳೂರುಎಕ್ಸ್ಪ್ರೆಸ್: ಯಾವುದೇ ಕೆಲಸಗಳು ಕೀಳಲ್ಲ, ಮೇಲಲ್ಲ, ಆಸಕ್ತಿಗೆ ಅನುಸಾರ ನೂರಕ್ಕೆ ನೂರರಷ್ಟು ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಾಗುತ್ತದೆ ಎಂದು ನೆಹರೂ ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.
ಅವರು ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ನೆಹರೂ ಯುವ ಕೇಂದ್ರದ ವತಿಯಿಂದ ಯುವ ಸಂಘಗಳ ಅಭಿವೃದ್ಧಿ ಪರಿಶೀಲನೆ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೇವೆ ಎಂದರೆ ದೇಶದ ಗಡಿಕಾಯುವುದಷ್ಟೇ ಅಲ್ಲ. ಅನಕ್ಷರಸ್ಥೆ ಸಾಲುಮರದ ತಿಮ್ಮಕ್ಕ ನಮಗೆ ಮಾದರಿ ಆಗುತ್ತಾರೆ. ಅವರು ಮಕ್ಕಳಿಲ್ಲದ ಕಾರಣಕ್ಕೆ ಮರಗಳನ್ನು ಬೆಳೆಸಿದರು. ಅವರಿಗೆ ಈಗ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ನೀಡಲಾಗಿದೆ. ಈಗಲೂ ಅವರಿಗೆ ಇದರರ್ಥಗೊತ್ತಿಲ್ಲ. ಆದರೆ ಅವರಲ್ಲಿದ್ದ ಆಸಕ್ತಿ, ಶ್ರದ್ಧೆ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ. ಬೇರೆ ದೇಶಗಳಲ್ಲಿ ಸಾಲುಮರದ ತಿಮ್ಮಕ್ಕ ಅವರ ಸಾಧನೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಎಂದರು.
ಜಿಲ್ಲಾ ಯುವಕ ಸಂಘಗಳ ಒಕ್ಕುಟದ ಅಧ್ಯಕ್ಷ ಇಮ್ರಾನ್ ಬೇಗ್ ಮಾತನಾಡಿ, ಇಲಾಖೆ ಎಂದ ಕೂಡಲೇ ನನಗೇನೂ ಬಂದಿಲ್ಲ ಎನ್ನುವ ಯುವಕರ ಮನಸ್ಥಿತಿ ಬದಲಾಗಬೇಕು. ಸರ್ಕಾರದಿಂದ, ಇಲಾಖೆಯಿಂದ ನನಗೇನು ಲಾಭ ಎನ್ನುವುದಕ್ಕಿಂತಲೂ ದೇಶಕ್ಕೆ ನಾನೇನು ಕೊಡುತ್ತಿದ್ದೇನೆ ಎನ್ನುವುದರ ಕಡೆ ಗಮನ ಹರಿಸಬೇಕು ಎಂದರು.
ಇದು ಯುವಕರಿಗೆ ಸಂಬಂಧಿಸಿದ ಇಲಾಖೆ ಆಗಿರುವುದರಿಂದ ಯಾರೋ ಮಹನೀಯರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುವ ಕಾಲ ಮುಗಿಯಿತು. ಈಗ ನಾವು ಆನಿಟ್ಟಿನಲ್ಲಿ ಸಾಗಿ ದೇಶಕ್ಕಾಗಿ ನಮ್ಮ ಕೊಡುಗೆ ಕೊಡಬೇಕಾದ ಸುಸಂದರ್ಭ ಇದಾಗಿದೆ ಎಂದರು.
ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಅಭಿಷೇಕ್ ಚವರೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಲೋಹಿತ್ ಸ್ವಾಗತಿಸಿದರು.
Distribution of Sports Goods