September 19, 2024

Clean drinking water facility for public benefit: ಸಾರ್ವಜನಿಕರಿಗೆ ಅನುಕೂಲು ಶುದ್ಧ ಕುಡಿಯುವ ನೀರಿನ ಘಟಕ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ನಗರದ ಎಂಜಿ ರಸ್ತೆಯ ೨೧ನೇ ವಾರ್ಡ್‌ನಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಸಿ.ಟಿ.ರವಿ ಉದ್ಘಾಟಿಸಿದರು.

ಶುಕ್ರವಾರ ೨೧ನೇ ವಾರ್ಡ್‌ನ ಅಂಡೆ ಛತ್ರದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ ೨೧ನೇ ವಾರ್ಡ್‌ನ ನಗರಸಭೆ ಸದಸ್ಯರ ಮನವಿಯನ್ನು ಪರಿಗಣಿಸಿ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ, ಜಿಲ್ಲೆಯ ಎಲ್ಲಾ ಜನರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುವುದಕ್ಕಾಗಿ ರಾಜ್ಯ ಸರ್ಕಾರ ಮತ್ತು ನಗರಸಭೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಈ ಪ್ರಯತ್ನದ ಒಂದು ಭಾಗ ಶುದ್ಧ ನೀರಿನ ಘಟಕ ಲೋಕಾರ್ಪಣೆ ಮಾಡಿರುವುದು ಎಂದರು.

ಚಿಕ್ಕಮಗಳೂರು ನಗರಸಭೆಗೆ ವಿಶೇಷ ಅನುದಾನವನ್ನು ಕೊಡುವುದರ ಜತೆಗೆ ೬೦ ಕೋಟಿ ರೂಗಳ ಅನುದಾನವನ್ನು ಯುಜಿಡಿ, ಅಮೃತ್ ಯೋಜನೆ, ರಸ್ತೆ ಮುರು ಡಾಂಬರೀಕರಣ ಮತ್ತು ಕಾಂಕ್ರೀಟ್ ಯೋಜನೆಗಾಗಿ ನೀಡಲಾಗಿದೆ, ಹಲವು ವಾರ್ಡ್‌ಗಳಲ್ಲಿ ಮರು ಡಾಂಬರೀಕರಣಮತ್ತು ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ೬೩೦ ಕೋಟಿ ರೂ ಮಂಜೂರುಮಾಡಿಸಿ ಜಿಲ್ಲೆಯ ಜನರ ಬಹುವರ್ಷದ ಬೇಡಿಕೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕೆಲಸ ಪ್ರಾರಂಭಿಸುವುದರ ಜತೆಗೆ ಈ ವರ್ಷದ ಕೋರ್ಸ್ ಪ್ರಾರಂಭವಾಗಿದೆ, ನಗರವನ್ನು ಸ್ವಚ್ಚ ನಗರವನ್ನಾಗಿಸುವ ನಿಟ್ಟಿನಲ್ಲಿ ಮನೆಮನೆಯಿಂದ ಕಸ ಸಂಗ್ರಹಣೆ ಮಾಡುವ ಕಾರ್ಯವನ್ನು ಸ್ವಚ್ಚತೆಯ ಒಂದು ಭಾಗವನ್ನಾಗಿಸಿಕೊಂಡು ನಗರಸಭೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಸಂಗ್ರಹಣೆ ಮಾಡಿದ ಕಸವನ್ನು ಗೋಬ್ಬರವನ್ನಾಸುವುದರ ಜತೆಗೆ ಕಸದಲ್ಲಿರುವ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸಿ ಅದರಿಂದ ಲಾಭವನ್ನು ಮಾಡುವ ಉದ್ದೇಶದಿಂದ ಘಟಕವನ್ನು ನಿರ್ಮಾಣ ಮಾಡುವ ಕೆಲಸ ಮಾಡಲಾಗಿದ್ದು, ಟೆಂಡರ್ ಚಿಕನ್ ಅವರೊಂದಿಗೆ ಚರ್ಚಿಸಿ ಮನವಿಯನ್ನು ಮಾಡಲಾಗಿದೆ ಎಂದರು.

ಅಮೃತ್ ಯೋಜನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ, ಯುಜಿಡಿ ಕಾಮಗಾರಿ ಏಪ್ರಿಲ್, ಮೇ ತಿಂಗಳಿನೋಳಗಾಗಿ ಮುಕ್ತಾಯಗೊಳ್ಳಲಿದೆ, ಎಂಜಿ ರಸ್ತೆ ಮತ್ತು ಮಾರ್ಕೆಟ್ ರಸ್ತೆಯ ಫುಟ್ಬಾತನ್ನು ಮರು ಜೋಡಣೆ ಮಾಡುವ ಕೆಲಸ ನಾಳೆಯಿಂದ ಪ್ರಾರಂಭವಾಗಲಿದೆ, ಎಪಿಜೆ ಅಬ್ದುಲ್ ಕಲಾಂ ನಮ್ಮ ದೇಶಕಂಡಂತಹ ತತ್ವಜ್ಞಾನಿ ಮತ್ತು ದೇಶದ ಜನಮನ್ನಣೆಯನ್ನು ಗಳಿಸಿದ ರಾಷ್ಟ್ರಪತಿ ಅವರ ಹೆಸರಿನಲ್ಲಿ ಭಾರತ ಸರ್ಕಾರ ಜಿಲ್ಲೆಗೆ ವಿಶೇಷ ಮಕ್ಕಳ ವಸತಿ ನಿಲಯ ನಿರ್ಮಾಣಕ್ಕೆ ಅನುದಾನವನ್ನು ನೀಡಿದ್ದು, ಬೇಲೂರು ರಸ್ತೆಯಲ್ಲಿ ಸುಸರ್ಜಿತ ವಸತಿ ನಿಲಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ, ಅಲ್ಪಸಂಖ್ಯಾತರಿಗಾಗಿ ತೇಗೂರಿನಲ್ಲಿ ವಸತಿ ಸಹಿತವಾದ ಜೂನಿಯರ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚಿಕ್ಕಮಗಳೂರು ನಗರ ಇತಿಹಾಸದಲ್ಲಿ ೨೭ ಕೋಟಿಗೂ ಹೆಚ್ಚಿನ ಅನುದಾನವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಿಸಿಕೋಂಡು ಬರಲಾಗಿದೆ ಎಂದರು.

ಚಿಕ್ಕಮಗಳೂರು ಹಬ್ಬ ಜ.೧೮ ರಿಂದ ೨೨ರ ವರೆಗೆ ೫ ದಿನಗಳು ನಡೆಯಲಿದ್ದು, ಎಲ್ಲರ ಸಹಭಾಗಿತ್ವದಿಂದ ೨ ವರ್ಷದ ಹಿಂದೆ ಯಶಸ್ವಿಯಾಗಿ, ರಾಜ್ಯ ಮತ್ತು ದೇಶದಲ್ಲಿ ಚಿಕ್ಕಮಗಳೂರು ಹಬ್ಬದ ಬಗ್ಗೆ ಮಾತನಾಡಲಾಗಿತ್ತು, ಅದೇ ರೀತಿಯಲ್ಲಿ ಈ ಬಾರಿಯೂ ಎಲ್ಲರ ಸಹಕಾರವಿರಲಿ, ಸ್ನೇಹಿತರು ಮತ್ತು ಬಂಧುಗಳಿಗೆ ಆಹ್ವಾನ ನೀಡಿ, ಅವರಿಗೆ ಚಿಕ್ಕಮಗಳೂರಿನ ಸಾಂಸ್ಕೃತಿಕ ವೈಭವದ ಸೋಗಸನ್ನು ಸವಿಯುವುದರ ಜತೆಗೆ ವಿವಿಧ ಬಗೆಯ ಭಕ್ಷ್ಯಭೋಜನಗಳ ಸವಿಯನ್ನು ಸವಿಯಲಿ, ಸುಚಿ ಮತ್ತು ರುಚಿಯಾದ ಆಹಾರವನ್ನು ತಯಾರಿಸಿ ಮಾರಾಟ ಮಾಡುವ ಅವಕಾಶವು ಆಹಾರ ಮೇಳದಲ್ಲಿ ಇರುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಸಾರ್ವಜನಿಕರು ಹಾಗೂ ಎಂಜಿ ರಸ್ತೆಯ ಅಂಗಡಿ ಮಾಲೀಕರು ಕುಡಿಯುವ ನೀರಿಗಾಗಿ ಬೇಡಿಕೆಯನ್ನಿಟ್ಟ ಹಿನ್ನಲೆಯಲ್ಲಿ, ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಸಭೆ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ, ಅದರ ನಿರ್ವಹಣೆ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸುಮಾರು ೬೦ ಕೋಟಿ ರೂಗಳ ವಿಶೇಷ ಅನುದಾನದಲ್ಲಿ ನಗರದೆಲ್ಲೆಡೆ ಮರು ಡಾಂಬರೀಕರಣ ನಡೆಯುತ್ತಿದೆ, ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿ ಮಾಡಲು ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ, ಅನೇಕ ಯೋಜನೆಗಳ ಮೂಲಕ ಚಿಕ್ಕಮಗಳೂರು ಒಂದು ಸ್ವಚ್ಚ ಸುಂದರ ಮತ್ತು ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ಪೌರಾಯುಕ್ತ ಬಸವರಾಜ್, ಮಾಜಿ ಅಧ್ಯಕ್ಷ ತಮ್ಮಯ್ಯ, ಕವಿತಾಶೇಖರ್, ಮುತ್ತಯ್ಯ, ಪ್ರೇಮ್‌ಕುಮಾರ್, ನಗರಸಭಾ ಸದಸ್ಯರುಗಳಾದ ವಿಫುಲ್‌ಕುಮಾರ್, ರೂಪಕುಮಾರ್, ಸುಜಾತ, ಸಿ.ಎಂ.ಕುಮಾರ್, ಅನುಮಧುಕುಮಾರ್, ಅರುಣ್‌ಕುಮಾರ್, ಮಂಜುನಾಥ್, ಶಿವಕುಮಾರ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Clean drinking water facility for public benefit

About Author

Leave a Reply

Your email address will not be published. Required fields are marked *

You may have missed