ಕಾರ್ಮಿಕ ದೇಶದ ಬೆನ್ನೆಲುಬು
ಚಿಕ್ಕಮಗಳೂರು: ಕಾರ್ಮಿಕ ದೇಶದ ಬೆನ್ನೆಲುಬು, ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕಾದರೆ ಕಾರ್ಮಿಕರ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮ ಎ.ಎಸ್. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರ ಸಂಘ(ರಿ) ಹಾಗೂ ರುಷಿಲ್ ಡೆಕೋರ್ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ರುಷಿಲ್ ಡೆಕೋರ್ ಲಿಮಿಟೆಡ್ ಇವರ ವತಿಯಿಂದ ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಡಬೇಕು. ಕಾರ್ಮಿಕರು ದೇಶದ ಬೆನ್ನೆಲುಬು ದೇಶದ ಆರ್ಥಿಕತೆ ಉತ್ತಮವಾಗಿರಬೇಕಾದರೆ ಕಾರ್ಮಿಕರ ಸ್ಥಿತಿಗತಿಗಳು ಅಚ್ಚುಕಟ್ಟಾಗಿರಬೇಕು. ರಾಷ್ಟ್ರದ ಬೆಳವಣಿಗೆಯಲ್ಲಿ ಶ್ರಮಿಕ ವರ್ಗದ ಕೊಡುಗೆ ಅಪಾರವಾದದ್ದು, ಕಾರ್ಮಿಕರ ರಕ್ಷಣೆಗಾಗಿ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಯಾವುದೇ ಅಪಘಾತ, ಅವಘಡಗಳು ಸಂಭವಿಸಿದರೆ. ಅಂತಹ ಕಾರ್ಮಿಕರಿಗೆ ಈ ಕಾನೂನುಗಳಡಿ ರಕ್ಷಣೆ ದೊರೆಯಲಿದೆ.
ಪ್ರತಿಯೊಬ್ಬ ಕಾರ್ಮಿಕರು ತಮಗಿರುವ ಸೌಲವತ್ತುಗಳ ಬಗ್ಗೆ ಅರಿತುಕೊಳ್ಳಬೇಕು. ಕಾರ್ಮಿಕರ ಹಿತ ದೃಷ್ಟಿಯಿಂದ ಸಮಾನ ವೇತನ, ನಿರ್ದಿಷ್ಟ ಕೆಲಸದ ಸಮಯ ಮಹಿಳೆಯರಿಗೆ ರಜೆ ಸಹಿತ ಹೆರಿಗೆ ಭತ್ಯೆ, ಆರೋಗ್ಯ ಸೇವೆ, ಕಾರ್ಮಿಕ ವಿಮೆ, ಕಾರ್ಮಿಕ ಮಕ್ಕಳ ಶಿಕ್ಷಣ ಹಾಗೂ ಕಾರ್ಮಿಕ ಕಲ್ಯಾಣ ನಿಧಿಗಳು ಇನ್ನೂ ಅನೇಕ ಸೌಲಭ್ಯಗಳನ್ನು ಸರ್ಕಾರ ಕಾರ್ಮಿಕರಿಗಾಗಿ ನೀಡಿದ್ದು, ಕಾರ್ಮಿಕರು ಈ ಸೌಲತ್ತುಗಳನ್ನು ಪಡೆದುಕೊಳ್ಳವಂತೆ ತಿಳಿಸಿದರು.
ಕಾರ್ಮಿಕರು ತಮ್ಮ ಭವಿಷ್ಯದ ದೃಷ್ಟಿಯಿಂದ ತಾವು ಗಳಿಸಿದ ಹಣದಲ್ಲಿ ಇಂತಿಷ್ಟು ಉಳಿಸಬೇಕು. ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳು ದೊರಕದಿದ್ದಲ್ಲಿ ಅಥವಾ ತೊಂದರೆಗಳಾದಲ್ಲಿ ಕಾರ್ಮಿಕರ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ಕಾರ್ಮಿಕರು ತಮಗಿರುವ ಕಾನೂನಾತ್ಮಕ ಸೌಲಭ್ಯಗಳು, ಸೇವೆಗಳನ್ನು ಅರಿತು ವಿಚಾರವಂತರಾಗಬೇಕೆಂದು ತಿಳಿಸಿದರು.
ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವತಂತ್ರ ಪೂರ್ವದಿಂದಲೂ ಕಾರ್ಮಿಕರ ಒಳಿತಿಗಾಗಿ ಕಾರ್ಮಿಕ ಕಾನೂನುಗಳು ಜಾರಿಯಲ್ಲಿವೆ. ಅವುಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಕಾರ್ಮಿಕರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತಿವೆ. ಕಾರ್ಮಿಕರು ಮತ್ತು ಮಾಲೀಕರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಉತ್ಪಾದನೆ ಮಟ್ಟ ಹಾಗೂ ದೇಶದ ಆರ್ಥಿಕತೆಗೆ ಸಹಕಾರಿಯಾಗುತ್ತದೆ. ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಯಾವುದೇ ಅಪಘಾತ ಅವಘಡಗಳು ಸಂಭವಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ತಮಗಿರುವ ಕಾನೂನಾತ್ಮಕ ಸೌಲಭ್ಯಗಳನ್ನು ಬಳಸಿಕೊಂಡು ಭಯ ಮುಕ್ತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪಪ್ರಧಾನ ಕಾನೂನು ಅಭಿರಕ್ಷಕ ನಟರಾಜು ಡಿ. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಕಾನೂನು ಅರಿವು ನೆರವು ಮೂಡಿಸುವುದರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರುಷಿಲ್ ಡೆಕೋರ್ ಲಿಮಿಟೆಡ್ನ ವೈಸ್ ಪ್ರೆಸಿಡೆಂಟ್ ಸುಮಂತ್ ಕುಮಾರ್ ಚಾಂದ್, ಚಿಕ್ಕಮಗಳೂರು ವಕೀಲರ ಸಂಘ(ರಿ)ದ ಕಾರ್ಯದರ್ಶಿ ಅನಿಲ್ ಕುಮಾರ್, ಚಿಕ್ಕಮಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ಬಿ.ಸಿ. ಸುರೇಶ್ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ವಂದಿಸಿದರು. ಮುಂತಾದವರಿದ್ದರು.
International Labor Day Celebration at Amble Industrial Area