ವಿಧಾನ ಪರಿಷತ್ ಸದಸ್ಯ ಹುದ್ದೆಗೆ ಇಂದು ಸಿ.ಟಿ.ರವಿ ನಾಮಪತ್ರ
ಚಿಕ್ಕಮಗಳೂರು: ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಆಪ್ತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಅವರ ವಿರುದ್ಧ ಸಿ.ಟಿ.ರವಿ ಸೋಲುಕಂಡ ಬಳಿಕ ಬಿಜೆಪಿಯಿಂದ ಯಾವುದೇ ಹುದ್ದೆಯನ್ನು ನೀಡಿರಲಿಲ್ಲ. ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡುವು ದಾಗಿ ಭರವಸೆ ನೀಡಿದ್ದರು.
ವಿಧಾನಸಭೆ ಸದಸ್ಯರಿಂದ ಆಯ್ಕೆಯಾಗುವ ದೈವಾರ್ಷಿಕ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡಿ ಆಯ್ಕೆ ಮಾಡುವ ಎಂಎಲ್ಸಿ ಸ್ಥಾನಕ್ಕೆ ಸಿ.ಟಿ.ರವಿಯವರನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಮುಖಂಡರು ಆಯ್ಕೆ ಮಾಡಿದ್ದಾರೆ. ಎನ್.ರವಿಕುಮಾರ್, ಎಂ.ಜಿ.ಮುಳೆ ಹಾಗೂ ಸಿ.ಟಿ.ರವಿಯವರ ಹೆಸರು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ವಿಧಾನ ಪರಿಷತ್ ಪಟ್ಟಿಯಲ್ಲಿ ಸಿ.ಟಿ.ರವಿಯವರ ಹೆಸರು ಘೋಷಣೆಯಾದ ಬಳಿಕ ಭಾನುವಾರ ಚಿಕ್ಕಮಗಳೂರು ನಗರಕ್ಕೆ ಆಗ ಮಿಸಿದ ಸಿ.ಟಿ.ರವಿ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿ ದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ.ರವಿ, ೧೯೯೫ರಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಯಾವುದನ್ನು ನಾನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ. ನನಗೆ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
CT Ravi nomination for the post of Vidhan Parishad member today