ಮಕ್ಕಳತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ‘ಕಲ್ಕಟ್ಟೆ ಕನ್ನಡಿಗ’ ಪ್ರಶಸ್ತಿ
ಚಿಕ್ಕಮಗಳೂರು: ಕುವೆಂಪು ಅವರ ವಿಶ್ವಮಾನವ ಸಂದೇಶ ಕನ್ನಡ ನಾಡಿನ ಬಹುದೊಡ್ಡ ಕೊಡುಗೆ ಎಂದು ಆಶಾಕಿರಣದ ಅಧ್ಯಕ್ಷ, ಮಕ್ಕಳತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ನುಡಿದರು.
ಕಲ್ಕಟ್ಟೆಪುಸ್ತಕಮನೆ ನಗರದ ಶಂಕರಮಠ ಪ್ರವಚನಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಕಲ್ಕಟ್ಟೆ ಕನ್ನಡಿಗ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡದ ಹೆಮ್ಮೆಯ ಕವಿ, ಜಗದಕವಿ, ಯುಗದ ಕವಿ ಕುವೆಂಪು ಅವರ ಸಾಹಿತ್ಯ ತಮ್ಮಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಪಂಚಸೂತ್ರಗಳ ವಿಶ್ವಮಾನವ ಸಂದೇಶ ಜಗತ್ತಿಗೆ ಕನ್ನಡದ ಕೊಡುಗೆಯಂತಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಪಂಚಮಂತ್ರಗಳು ಅತ್ಯಂತ ಮಹತ್ವಪೂರ್ಣ. ಈ ಸಂದೇಶ ಸಾರುವ ಹಿನ್ನಲೆಯಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಿಸಿ ಹಂಚಿರುವುದನ್ನು ಪ್ರಸ್ತಾಪಿಸಿ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೂ ತರ್ಜಮೆ ಮಾಡಿ ದೇಶ ವಿದೇಶಗಳಲ್ಲಿ ವಿತರಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಚಿಕ್ಕಮಗಳೂರಿಗೆ ವೈದ್ಯನಾಗಿ ಕಾಲಿಟ್ಟ ದಿನದಿಂದ ಕನ್ನಡಿಗನಾಗಿ ಬದುಕುತ್ತಿದ್ದೇನೆ. ಮಕ್ಕಳ ವೈದ್ಯನಾಗಿ ೪೫ವರ್ಷಕ್ಕೂ ಹೆಚ್ಚು ಸೇವೆಸಲ್ಲಿಸಿದ್ದು ನೂರಾರು ಪುರಸ್ಕಾರಗಳು ಲಭ್ಯವಾಗಿದ್ದರೂ ಇಂದಿನ ನನ್ನೂರಿನ ಪುರಸ್ಕಾರ ಶ್ರೇಷ್ಠವೆಂದು ಭಾವಿಸುವುದಾಗಿ ನುಡಿದ ಡಾ.ಜೆಪಿಕೆ, ಪುರಸ್ಕಾರಗಳು ಶನಿಯತರ ಕಾಡುತ್ತವೆ ಎಂಬ ಕುವೆಂಪು ಮಾತುಗಳನ್ನೂ ಉಲ್ಲೇಖಿಸಿ ಕಲ್ಕಟ್ಟೆ ಕನ್ನಡಿಗ ಪುರಸ್ಕಾರ ಸಂತಸ ತಂದಿದೆ ಎಂದರು.
ಬಹಳಕಾಲದಿಂದ ಆತ್ಮೀಯರಾಗಿರುವ ಕಲ್ಕಟ್ಟೆ ಕುಟುಂಬ ನಮ್ಮೂರಿನ ಸಾಂಸ್ಕೃತಿಕ ರಾಯಭಾರಿ ಎಂದ ಡಾ.ಜೆ.ಪಿ.ಕೃಷ್ಣೇಗೌಡ, ಸಾಹಿತ್ಯ, ಸಂಘಟನೆ, ಸಾಂಸ್ಕೃತಿಕ ವೈಭವದ ಅಪರೂಪದ ಮನೆ. ನಮ್ಮೆಲ್ಲರಿಗೂ ಆದರ್ಶವಾಗುತ್ತದೆ ಎಂದರು.
ಪತ್ರಿಕಾ ವಿತರಕ ರಾಕೇಶ್ ಮತ್ತು ಡಿಟಿಪಿ ಅಪರೇಟರ್ ಜ್ಯೋತಿ ಅವರನ್ನು ಇದೇ ಸಂದರ್ಭದಲ್ಲಿ ಪ್ರಶಸ್ತಿಪತ್ರದೊಂದಿಗೆ ಸನ್ಮಾನಿಸಲಾಯಿತು. ಪ್ರಾಸ್ತಾವಿಸಿದಕಲ್ಕಟ್ಟೆಪುಸ್ತಕದ ಮನೆಯ ಸಂಸ್ಥಾಪಕ ಎಚ್.ಎಂ.ನಾಗರಾಜರಾವ್, ಮಕ್ಕಳಿಗೆ ಪ್ರೀತಿಯ ಧಾರೆ ಹರಿಸುವುದರ ಜೊತೆಗೆ ಅಂಧಮಕ್ಕಳನ್ನೂ ಪಾಲಿಸಿ ಪೋಷಿಸುತ್ತಿರುವ ಡಾ.ಜೆಪಿಕೆ ಕನ್ನಡ ಸಂಸ್ಕೃತಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆಂದರು. ಸೀತೂರಿನ ಖ್ಯಾತಗಾಯಕಿ ರಂಗಿಣಿ ಯು.ರಾವ್ ಅವರ ಗೀತಗಾಯನ ಗಮನಸೆಳೆಯಿತು.
Pediatrician Dr. J.P. Krishna Gowda ‘Calcutta Kannadiga’ Award