September 19, 2024

11.59 Crores for various development works: ವಾರ್ಡ್ ನಂ.೨ ಮತ್ತು ೩ರಲ್ಲಿ ೧೧.೫೯ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ

0

ಚಿಕ್ಕಮಗಳೂರು:  ನಗರದ ಬೈಪಾಸ್ ರಸ್ತೆಯಲ್ಲಿ ಬರುವ ೨ ಮತ್ತು ೩ನೇ ವಾರ್ಡ್‌ನಲ್ಲಿ ಈವರೆಗೂ ೧೧.೫೯ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಅವರು ಶುಕ್ರವಾರ ಸಂಜೆ ಬೈಪಾಸ್ ರಸ್ತೆಯ ನೀರಿನ ಟ್ಯಾಂಕ್ ಸಮೀಪವಿರುವ ಚೇತನ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನಗರ ವ್ಯಾಪ್ತಿಗೆ ಬರುವ ೩೨ ವಾರ್ಡ್‌ಗಳಿಗೆ ಹೋಲಿಸಿದ್ದಲ್ಲಿ ೨ ಮತ್ತು ೩ನೇ ವಾರ್ಡ್‌ಗಳು ಅತ್ಯಂತ ದೊಡ್ಡ ವಾರ್ಡ್‌ಗಳಾಗಿದ್ದು, ಜನರ ಸಮಸ್ಯೆಗಳು ಕೂಡ ದೊಡ್ಡದಾಗಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಪಾರ್ಕ್‌ಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ೭೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ತರಲಾಗಿದ್ದು, ಈ ಹಣದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೀಪಾ ನರ್ಸಿಂಗ್‌ಹೋಂನಿಂದ ರಸ್ತೆಯ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೆ ಯಗಚಿ ನೀರಿನ ಸಂಪರ್ಕ ಬಂದ ನಂತರ ೧ ಅಡಿಗೆ ಕೇವಲ ೩೫ ರೂ. ಇದ್ದ ಬೆಲೆ ಈಗ ೩೫೦೦ರೂ.ವರೆಗೂ ಬೇಡಿಕೆ ಬಂದಿದೆ. ಇಲ್ಲಿರುವ ಭೂಮಿಗೆ ಇಷ್ಟು ಡಿಮ್ಯಾಂಡ್ ಬರಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೈಗೊಂಡ ಕಾಮಗಾರಿಗಳೇ ಕಾರಣ ಎಂದು ಸಿ.ಟಿ.ರವಿ ಹೇಳಿದರು.

ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರೆ ಜೊತೆಗೆ ಎಐಟಿ ಸರ್ಕಲ್‌ನಿಂದ ಹಿರೇಮಗಳೂರುವರೆಗಿನ ಬೈಪಾಸ್ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಗರದ ಅಭಿವೃಧ್ಧಿಗೆ ಬಂದಿರುವ ವಿಶೇಷ ಅನುದಾನದಲ್ಲಿ ೨೭ ಕೋಟಿ ರೂ. ವೆಚ್ಚದಲ್ಲಿ ಎ.ಐ.ಟಿ. ಸರ್ಕಲ್‌ನಿಂದ ಹಿರೇಮಗಳೂರುವರೆಗೆ ವಿಶೇಷ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಚಿಕ್ಕಮಗಳೂರು ನಗರದ ಎಲ್ಲಾ ೩೫ ವಾರ್ಡ್‌ಗಳಿಗೂ ೧೨ ಲಕ್ಷ ಎಲ್.ಇ.ಡಿ. ಬೀದಿ ದೀಪ ಅಳವಡಿಸುವ ಕೆಲಸ ಮುಂದುವರೆದಿದ್ದು, ರಸ್ತೆಯ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಆರೋಗ್ಯ ರಕ್ಷಣೆ ಹಿತದೃಷ್ಠಿಯಿಂದ ನಗರದ ಎಐಟಿ ಕಾಲೇಜಿನಲ್ಲಿ ಬೃಹತ್ ಆರೋಗ್ಯ ಮೇಳ ನಡೆಸಲಾಗಿದ್ದು, ಇದರಲ್ಲಿ ೧೦ ಸಾವಿರ ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಇದೇ ಜನವರಿ ತಿಂಗಳು ೫ ದಿನಗಳ ಕಾಲ ಚಿಕ್ಕಮಗಳೂರು ನಗರದಲ್ಲಿ ಚಿಕ್ಕಮಗಳೂರು ಹಬ್ಬ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಯಶಸ್ವಿಗೆ ನಗರದ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.

ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ತಮಗೆ ವಿವಿಧ ಜವಾಬ್ದಾರಿ ನೀಡಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ಹಿಂದೆ ಬಿದ್ದಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಸತತವಾಗಿ ನಾಲ್ಕು ಬಾರಿ ನನ್ನನ್ನು ಆಯ್ಕೆ ಮಾಡಿದ ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಜನರ ವಿಶ್ವಾಸ ಮತ್ತು ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ನಗರದ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ವಿನಾಃಕಾರಣ ನಗರಸಭೆ ಕಛೇರಿಗೆ ಪದೇ ಪದೇ ಅಲಿಯುವುದನ್ನು ತಪ್ಪಿಸಲು ನಗರದ ೩೫ ವಾರ್ಡ್‌ಗಳಲ್ಲೂ ಸಾರ್ವಜನಿಕರ ಬಳಿಗೆ ನಗರಸಭೆ ಎಂಬ ಶೀರ್ಷಿಕೆಯಡಿ ಜನಸಂಪರ್ಕ ಸಭೆಯನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಯಾವುದೇ ಸಮಸ್ಯೆ ಇದ್ದರೂ ಕ್ಷೇತ್ರದ ಜನಪ್ರಿಯ ಶಾಸಕರ ಸಮ್ಮುಖದಲ್ಲೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಸಿ.ಡಿ.ಎ. ಅಧ್ಯಕ್ಷ ಆನಂದ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆಯ ಸದಸ್ಯರಾದ ಕವಿತಾಶೇಖರ್, ಮಧುಕುಮಾರ್‌ರಾಜ್ ಅರಸ್, ನಗರಸಭೆ ಆಯುಕ್ತರಾದ ಬಸವರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆಇಬಿ ಕೆ.ಡಬ್ಲ್ಯೂ.ಡಿ., ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ನಗರಸಭಾ ಸದಸ್ಯರ ಸಿ.ಎನ್. ಅರುಣ್‌ಕುಮಾರ್ ಸ್ವಾಗತಿಸಿದರು. ನಗರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

11.59 Crores for various development works

About Author

Leave a Reply

Your email address will not be published. Required fields are marked *

You may have missed