ಮಾದಕ ವಸ್ತುಗಳ ಕಳ್ಳಸಾಗಾಣೆ-ಮಾದಕ ವ್ಯಸನದ ವಿರುದ್ಧ ಜಾಗೃತಿ ಜಾಥಾ
ಚಿಕ್ಕಮಗಳೂರು: ಸಮುದಾಯವನ್ನು ಮಾದಕ ವ್ಯಸನಗಳಿಂದ ಹೊರತರಬೇಕೆಂಬುದು ನಮ್ಮ ನಿಮ್ಮೆಲ್ಲರ ಕಾಳಜಿಯಾಗಬೇಕೆಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಕರೆ ನೀಡಿದರು.
ಅವರು ಇಂದು ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಕಳ್ಳಸಾಗಾಣೆ ಹಾಗೂ ಮಾದಕ ವ್ಯಸನದ ವಿರುದ್ಧ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ಯಸನಮುಕ್ತ ಕರ್ನಾಟಕ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ, ಇವರುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳೊಂದಿಗೆ ಜನಜಾಗೃತಿ ಜಾಥಾ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ನಗರದ ವಿವಿಧ ಶಾಲೆಯ ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನಿರ್ಮೂಲನೆ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಈಗಾಗಲೇ ಪ್ರತಿಜ್ಞಾ ವಿಧಿ ಸ್ವೀಕರಿಸಿದಂತೆ ನೀವು ನಿಮ್ಮ ಶಾಲೆ, ಮನೆಯ ಸುತ್ತಮುತ್ತಲ ಪರಿಸರದ ಸ್ನೇಹಿತರಿಗೆ ಹೇಳಬೇಕು. ಡ್ರಗ್ಸ್ನಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುತ್ತದೆ. ಯಾರೂ ಕೂಡ ಈ ದುಶ್ಚಟಕ್ಕೆ ಬಲಿಯಾಗಬಾರದೆಂದು ಮನವಿ ಮಾಡಿದರು.
ಮಾದಕ ವಸ್ತುಗಳು ಅಥವಾ ಮಾದಕ ವ್ಯಸನಿಗಳು ಕಂಡುಬಂದರೆ ೧೯೫೦ ಅಥವಾ ೧೧೨ ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲಾ ಶಾಲಾ-ಕಾಲೇಜಿಗೆ ಭೇಟಿನೀಡಿ ಡ್ರಗ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆಂದರು.
ತಾಲೂಕು ಕಚೇರಿ ಆವರಣದಿಂದ ಹೊರಟ ಜಾಥಾ ಎಂ.ಜಿ ರಸ್ತೆ ಮೂಲಕ ಸಾಗಿ, ಅಜಾದ್ ಪಾರ್ಕ್ ತಲುಪಿತು. ಈ ಸಂದರ್ಭದಲ್ಲಿ ಎಎಸ್ಪಿ ಕೃಷ್ಣಮೂರ್ತಿ, ಸಿಇಎನ್ ಠಾಣೆ ನೋಡಲ್ ಅಧಿಕಾರಿ ಗವಿರಾಜ್ ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.
Awareness march against drug trafficking and drug addiction