September 20, 2024

ಜಿಲ್ಲಾ ಕೇಂದ್ರದಲ್ಲಿ ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಡ

0
ಸಿಡಿಬಿ ಯೋಜನೆಯಡಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಗಳ ವಿತರಣೆ

ಸಿಡಿಬಿ ಯೋಜನೆಯಡಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಗಳ ವಿತರಣೆ

ಚಿಕ್ಕಮಗಳೂರು:  ತೆಂಗು ಬೆಳೆಗಾರರನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಸರ್ಕಾರ ೩೫ ಲಕ್ಷ ರೂಗಳನ್ನು ಮಂಜೂರು ಮಾಡಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ಅವರು ಇಂದು ಕ್ಷೇತ್ರದ ತೋಟಗಾರಿಕೆ ಇಲಾಖೆಯಲ್ಲಿ ಏರ್ಪಡಿಸಲಾಗಿದ್ದ ಸಿಡಿಬಿ ಯೋಜನೆಯಡಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಪ್ರತೀ ಹೆಕ್ಟೇರ್‌ಗೆ ಓರ್ವ ಫಲಾನುಭವಿಯನ್ನು ಆಯ್ಕೆಮಾಡಿ ವಾರ್ಷಿಕ ೧೭.೫೦೦ ರೂ ಬೆಲೆಯ ಪರಿಕರಗಳನ್ನು ರೈತರಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಂಡ ರೈತರು ಆರ್ಥಿಕ ಸದೃಢರಾಗಬೇಕೆಂದು ಕರೆ ನೀಡಿದರು.

ದೇಶದಲ್ಲಿ ಅತೀ ಹೆಚ್ಚು ತೆಂಗು ಉತ್ಪಾದನೆಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದ್ದು, ಹೆಚ್ಚು ತೆಂಗು ಬೆಳೆಗಾರರಿರುವ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯನ್ನು ಆಯ್ಕೆಮಾಡಿಕೊಂಡು ರೈತರಿಗೆ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಕಲ್ಪವೃಕ್ಷ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿರುವ ತೆಂಗು ಬೆಳೆ ಇತ್ತೀಚೆಗೆ ಪ್ರಕೃತಿ ವಿಕೋಪಗಳಿಂದ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದ್ದು, ಈ ಸಂಬಂಧ ನುರಿತ ತಜ್ಞರಿಂದ ಪರಿಶೀಲನೆ ನಡೆಸಿ ಅದಕ್ಕೆ ಬೇಕಾದ ಸಾವಯವ ಗೊಬ್ಬರ, ಜೈವಿಕ ನಿಯಂತ್ರಣ, ಕೀಟಬಾದೆಗಳನ್ನು ತೆಗೆಸಿ, ಒಂದು ಗಿಡಕ್ಕೆ ೩ ಕೆ.ಜಿ ಬೇವಿನ ಹಿಂಡಿ, ೨೫ ಕೆ.ಜಿ ಹಸಿರೆಲೆ ಗೊಬ್ಬರ ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬರಗಾಲದಿಂದ ತತ್ತರಿಸಿರುವ ಲಕ್ಯಾ ಹೋಬಳಿ ರೈತರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ತೆಂಗು ಬೆಳೆಯಲ್ಲಿ ಯಾವುದೇ ವೇಸ್ಟ್ ಆಗುವುವಂತದ್ದು ಇಲ್ಲ, ಎಳನೀರು, ಕಾಯಿ, ಕೊಬ್ಬರಿ, ಗರಿಬಿದ್ದರೆ ಪೊರಕೆ, ಮರಬಿದ್ದರೆ ತೀರುಗಳಾಗಿ ಮಾಡಿ ಮನೆ ಕಟ್ಟಲು ಉಪಯೋಗಿಸುತ್ತಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲೇ ಬೆಂಬಲ ಬೆಲೆ ಕೊಬ್ಬರಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ತೆಂಗು ಬೆಳೆಗೆ ಉತ್ತಮ ಬೆಲೆ ದೊರೆತಾಗ ಹೆಚ್ಚು ತೆಂಗನ್ನು ಬೆಳೆಯಲು ರೈತರು ಮುಂದಾಗುತ್ತಾರೆ ಎಂದರು.

ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತೆಂಗು ಬೆಳೆ ಬರಗಾಲದಲ್ಲೂ ಹಾನಿಯಾಗುವುದಿಲ್ಲ, ಆದರೆ ಅಡಿಕೆ ಬೆಳೆಗೆ ೨ ತಿಂಗಳು ನೀರು ಕೊಡದಿದ್ದರೆ ಹಾನಿಯಾಗುತ್ತದೆ ಎಂದು ತಿಳಿಸಿದರು.

ತಾಲೂಕುಹಿರಿಯ ಸಹಾಯಕ ನಿರ್ದೇಶಕರಾದ ನೇತ್ರಾವತಿ, , ಮಾತನಾಡಿ ದೇಶದ ತೆಂಗು ಬೆಳೆಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದೆ, ೬.೨೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ತೆಂಗಿನ ಎಣ್ಣೆ ತಾಯಿ ಹಾಲಿಗೆ ಸಮ, ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಒಳ್ಳೆಯ ಔಷಧಿಯಾಗಿದೆ ಎಂದರು.

ದೇಹದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವ ರೋಗಗಳನ್ನು ನಿಯಂತ್ರಣ ಮಾಡುತ್ತದೆ. ಬೊಜ್ಜು, ಹೆಚ್ಚು ತೂಕ ಇರುವವರಿಗೆ ತೂಕ ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ತೆಂಗಿನ ಎಣ್ಣೆ ಬಳಸುವುದು ಉತ್ತಮವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಯಾ ಗ್ರಾ.ಪಂ ಉಪಾಧ್ಯಕ್ಷ ದಿನೇಶ್, ಶೋಭಾ, ಶಶಿಧರ್, ಗಿರೀಶ್, ತೇಜುನಾಗರಾಜ್, ಬಗರ್ ಹುಕ್ಕುಂ ಸದಸ್ಯರಾದ ಕೆಂಗೇಗೌಡ, ಶಂಕರ್‌ನಾಯ್ಕ ಉಪಸ್ಥಿತರಿದ್ದರು.

Pressure on the government to set up a coconut buying center in the district headquarters

About Author

Leave a Reply

Your email address will not be published. Required fields are marked *