September 20, 2024

ದೇವಾಲಯಗಳಿಗೆ ಭಕ್ತರು ಹೋದಾಗ ಸಂಸ್ಕಾರದ ಜೊತೆಗೆ ಧಾರ್ಮಿಕ ಭಾವನೆ ಬೆಳೆಯುತ್ತದೆ

0
ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶ್ರೀ ಭಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವ

ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶ್ರೀ ಭಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವ

ಚಿಕ್ಕಮಗಳೂರು:  ಭಕ್ತರು ದೇವಾಲಯಗಳಿಗೆ ಹೋದಾಗ ಸಂಸ್ಕಾರವಂತರಾಗುವ ಜೊತೆಗೆ ಧಾರ್ಮಿಕ ಭಾವನೆ ಹೆಚ್ಚಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಶಾಸಕ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶ್ರೀ ಭಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚೆಗೆ ಹಳ್ಳಿಗಿಂತಲೂ ನಗರ ವ್ಯಾಪ್ತಿಯಲ್ಲಿ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವಿದೆ. ತಮ್ಮ ಬದುಕಿನ ಜಂಜಾಟದ ಜೊತೆಗೆ ಆಧ್ಯಾತ್ಮದ ಕಡೆ ಆಸಕ್ತಿ ವಹಿಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ದೇವಸ್ಥಾನ ಒಳಗೆ ಹೋದ ತೆಂಗಿನಕಾಯಿ, ಬಾಳೇಹಣ್ಣು ಪ್ರಸಾದವಾಗಿ ನೀರು ತೀರ್ಥವಾಗಿ ಹೊರಬಂದಂತೆ ಹಾಗೆ ನಾವು ದೇವರ ದರ್ಶನ ಪಡೆದ ಬಳಿಕ ಸಂಸ್ಕಾರವಂತರಾಗಿ ಹೊರಬರುತ್ತೇವೆ ಎಂದು ತಿಳಿಸಿದರು.

ಈ ಉದ್ದೇಶದಿಂದಲೇ ನಮ್ಮ ಪೂರ್ವಜರು ದೇವಾಲಯಗಳ ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಭಕ್ತಿಯನ್ನು ಬಿತ್ತಲು ಸಹಕರಿಸಿದ್ದಾರೆ. ಈ ದೇವಸ್ಥಾನಕ್ಕೆ ಅನುದಾನ ನೀಡಿದಂತೆ ದೇವಾಲಯದ ಜಾಗವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎಂಬಂತೆ ಸರ್ವರ ಸೇವೆಯ ಪರಿಶ್ರಮದಿಂದ ಮಾತ್ರ ದೇವಾಲಯಗಳ ನಿರ್ಮಾಣ ಮಾಡಲು ಸಾಧ್ಯ. ಈ ಸುಂದರ ದೇವಾಲಯ ಮತ್ತು ಸಮುದಾಯ ಭವನ ಉದ್ಘಾಟನೆಗೆ ಬಂದಿರುವುದು ಸಂತಸ ತಂದಿದೆ. ಈ ಅವಕಾಶ ಕಲ್ಪಿಸಿದ ಮತದಾರ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಹೇಳಿದರು.

ದೇವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡುವುದು ಒಂದು ಕಡೆ ನೆಮ್ಮದಿ ಇದೆ, ಆದರೆ ಹೊಸ ದೇವಾಲಯ ನಿರ್ಮಾಣಕ್ಕೆ ನನ್ನ ವಯಕ್ತಿಕ ವಿರೋಧವಿದೆ, ದೇವಾಲಯ ನಿರ್ಮಾಣ ಮಾಡುವುದು ದೊಡ್ಡದಲ್ಲ, ನಿತ್ಯವೂ ಅಲ್ಲಿ ಪೂಜೆ ಕೈಂಕರ್ಯಗಳು ನಡೆಯಬೇಕು. ಇದಕ್ಕೆ ಹೊಸದಾಗಿ ಅರ್ಚಕ ನೇಮಕವಾಗಬೇಕು, ಇಂದು ಎಲ್ಲರೂ ವಿದ್ಯಾವಂತರಾಗುತ್ತಿರುವುದರಿಂದ ಪೌರೋಹಿತ್ಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ವಿಷಾಧಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ತನ್ನಂತೆ ಪರರ ಬಗೆದೊಡೆ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ನಮ್ಮೊಳಗೆ ಇರದ ದೇವರನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಅದಕ್ಕಾಗಿ ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ, ಎನ್ನಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಸವಯ್ಯ ಎಂಬಂತೆ ನಮ್ಮೊಳಗೆ ಭಗವಂತನ ಕಾಣುವ ಬಗೆಯನ್ನು ಸರಳವಾಗಿ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಂತರಂಗದಲ್ಲಿ ಭಕ್ತಿ ಇದ್ದರೆ ಮಾತ್ರ ದೇವರ ವಿಗ್ರಹದ ಮುಂದೆ ನಿಂತು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಅಂತರಂಗದ ಭಕ್ತಿ ವಿದ್ಯುಚ್ಚಕ್ಕಿಯ ಹಾಗೆ ಭಗವಂತನೊಂದಿಗೆ ಸೇರಲು ಸಂಪರ್ಕ ಸೇತುವೆಯಾಗುತ್ತದೆ, ಭಕ್ತಿ ಇಲ್ಲದಿದ್ದರೆ ಭಗವಂತನನ್ನು ಕಾಣಲು ಸಾಧ್ಯವಿಲ್ಲ ಎಂದರು.

ಭಗವಂತನ ಕಾಣುಲು ದೇವಾಲಯಗಳು ಪೂರಕವಾಗಿವೆ. ದೇವರು ಎಲ್ಲೆಡೆ ಇದ್ದಾನೆ ಎಂಬುದಕ್ಕೆ ದೇವಾಲಯಗಳು ಸಾಕ್ಷಿಯಾಗಿವೆ. ಸಂಸ್ಕಾರ ಮತ್ತು ಸಂಸ್ಕೃತಿ ಮರೆತರೆ ಅಧಃಪತನವಾಗುತ್ತದೆ. ನಮ್ಮ ನಾಶಕ್ಕೆ ಕಾರಣವಾಗುವುದರಿಂದ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡು ದೇವಾಲಯದ ಪರಂಪರೆಯನ್ನು ಬೆಳೆಸೋಣ ಎಂದು ಕರೆನೀಡಿದರು.

ದೇವಾಲಯಗಳು ಸಮಾಜವನ್ನು ಒಟ್ಟುಗೂಡಿಸಲು ಪ್ರೇರಣೆಯಾಗಲಿ, ದೇವರು ಯಾರಿಗೂ ತಾರತಮ್ಯ ಮಾಡಿಲ್ಲ, ಯಾವುದೇ ಭೇದಬಾವ ಮಾಡದೆ ಸಮಾಜ ಮತ್ತು ಗ್ರಾಮವನ್ನು ಒಟ್ಟುಗೂಡಿಸಲು ದೇವಾಲಯಗಳು ಸಹಕಾರಿಯಾಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮನೆಗೊಂದು ತಾಯಿ, ಊರಿಗೊಂದು ದೇವಾಲಯ ಇರಬೇಕು. ಹಾಗೆಯೇ ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಜನರಲ್ಲಿ ಧಾರ್ಮಿಕ ಭಾವನೆ ಬಿತ್ತಲು ದೇವಾಲಯಗಳು ಪೂರಕವಾಗಿವೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಶ್ರೀ ಬಸವ ಮುರುಳಸಿದ್ದ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ್ ಮಹಾ ಸ್ವಾಮೀಜಿ, ಸಿಂದಿಗೆರೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಮಹಾ ಸ್ವಾಮಿಗಳು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಬಾರಂದೂರು ಪ್ರಕಾಶ್, ಗ್ರಾ.ಪಂ ಅಧ್ಯಕ್ಷೆ ಕಾವೇರಮ್ಮ ಬಸವರಾಜ್, ಉಪಾಧ್ಯಕ್ಷೆ ಭಾಗ್ಯ ಚಂದ್ರಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್ ನಿರಂಜನ್, ಡಾ. ಎಸ್. ವಿನಾಯಕ್ ಸಿಂದಗೆರೆ, ಶಂಕರೇಗೌಡ, ಬೀರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜು, ವಿರೂಪಾಕ್ಷ, ಪರಮೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.

Chikkalleshwar temple renovation in Belawadi

About Author

Leave a Reply

Your email address will not be published. Required fields are marked *