ಸಹಕಾರ ಸಂಘಗಳು ರೈತರ ಸಂಕಷ್ಟಕ್ಕೆ ಧಾವಿಸುತ್ತಿವೆ
ಚಿಕ್ಕಮಗಳೂರು: ಬಡವರು, ರೈತರ ಸಂಕಷ್ಟಗಳ ನೆರವಿಗೆ ಪತ್ತಿನ ಸಹಕಾರ ಸಂಘಗಳು ಮುಂದಾಗುತ್ತಿರುವುದು ಅಭಿನಂದನೀಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ನಗರದ ಐಜಿ ರಸ್ತೆಯಲ್ಲಿ ಕೆಳಗೂರು ಮಥಾಯಿಸ್ ಟವರ್ ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿದ್ದ ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಹಕಾರಿ ಸಂಘಗಳು ಸಣ್ಣ, ಅತಿಸಣ್ಣ ರೈತರ ನೆರವಿಗೆ ಧಾವಿಸಿ ಕಡಿಮೆ ಬಡ್ಡಿದರದಲ್ಲಿ ಸಲ ವಿತರಿಸುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ ದೇವರಾಜ್ ಮಾತನಾಡಿ, ಸಂಘವು ಕಳೆದ ೧೦ ವರ್ಷಗಳಲ್ಲಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ನೂತನ ಕಟ್ಟಡ ಹೊಂದಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚು ಲಾಭ ಗಳಿಸುವ ಮೂಲಕ ಸದಸ್ಯರಿಗೆ ಹೆಚ್ಚಿನ ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದ ಅವರು ೪೪.೫೮ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಇದು ಕಳೆದ ವರ್ಷಕ್ಕಿಂತ ಶೇ.೨೬ ರಷ್ಟು ಹೆಚ್ಚಿನ ಲಾಭ ಗಳಿಸಲಾಗಿದೆ. ದುಡಿಯುವ ಬಂಡವಾಳ ೧೬.೩ ಕೋಟಿ ರೂ ಇದ್ದು, ಪ್ರಸಕ್ತ ವರ್ಷ ಶೇ.೧೨ ರಷ್ಟನ್ನು ಸದಸ್ಯರಿಗೆ ಡಿವಿಡೆಂಟ್ ನೀಡಲಾಗಿದೆ ಎಂದರು.
ಬ್ಯಾಂಕಿನ ಈ ನೂತನ ಕಟ್ಟಡದಲ್ಲಿ ಆಧುನಿಕತೆಗೆ ತಕ್ಕಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಲು ಗುರಿ ಹೊಂದಲಾಗಿದೆ. ಸದಸ್ಯರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಸೇವಾಕೇಂದ್ರ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು.
ಬ್ಯಾಂಕಿಂಗ್ ಶಾಖೆಯನ್ನು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ನೆರವೇರಿಸಿದರು. ಆಡಳಿತ ಮಂಡಳಿಯನ್ನು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ ವಿರೂಪಾಕ್ಷ, ಉದ್ಘಾಟಿಸಿದರು. ಶರಣಗೌಡ ಜಿ ಪಾಟೀಲ್ ಭದ್ರತಾ ಕೊಠಡಿ ಉದ್ಘಾಟಿಸಿದರು.
ವಿಶೇಷ ಆಹ್ವಾನಿತರಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಡಾ. ಡಿ.ಎಸ್ ತೇಜಸ್ವಿನಿ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಕೃಷ್ಣಮೂರ್ತಿ, ದೊಡ್ಡೇಗೌಡ, ಸೋಮಶೇಖರಪ್ಪ, ಬಾಲಕೃಷ್ಣ, ಜಯರಾಮೇಗೌಡ, ರವಿಕುಮಾರ್, ಚೇತನ್.ಜಿ ನಾಯಕ್, ಮಮತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವೈ.ವೆಂಕಟೇಶ್ ಉಪಸ್ಥಿತರಿದ್ದರು.
ಮೊದಲಿಗೆ ನಿರ್ದೇಶಕ ಬಿ.ಜಿ ಸೊಮಶೇಖರ್ ಸ್ವಾಗತಿಸಿ, ಟಿ.ಎಂ ದೇವಿಕ ನಿರೂಪಿಸಿ, ಕೆ.ಜಿ ನೀಲಕಂಠಪ್ಪ ವಂದಿಸಿದರು.
Inauguration of the new building of Samana Patta Souharda Cooperative Society